ಉಡುಪಿ ಜಿಲ್ಲೆಯ 49 ಪಿಡಿಓಗಳಿಗೆ ವರ್ಗಾವಣೆ ಭೀತಿ !

ಉಡುಪಿ, ಆ.24: ಒಂದೇ ಗ್ರಾಮ ಪಂಚಾಯತ್ನಲ್ಲಿ ಐದು ವರ್ಷಗಳ ಕಾಲ ಸೇವೆ ಪೂರ್ಣಗೊಳಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ವರ್ಗಾವಣೆ ಕಡ್ಡಾಯಗೊಳಿಸಲಾಗಿದ್ದು, ಅದರಂತೆ ಉಡುಪಿ ಜಿಲ್ಲೆಯ 49 ಗ್ರಾಮ ಪಂಚಾಯತ್ಗಳ ಪಿಡಿಓಗಳು ವರ್ಗಾವಣೆಗೊಳ್ಳುವ ಭೀತಿಯಲ್ಲಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದೀರ್ಘಕಾಲ ಒಂದೇ ಸ್ಥಳದ ನಿಯೋಜನೆ ಬಗ್ಗೆ ಆನೇಕ ದೂರುಗಳು ಎಲ್ಲ ಕಡೆಗಳಲ್ಲಿ ವ್ಯಕ್ತವಾಗಿದ್ದು, ಆ ಹಿನ್ನೆಲೆಯಲ್ಲಿ ಸರಕಾರವು ಪಾರದರ್ಶಕತೆ ಮತ್ತು ಸಮರ್ಪಕ ಆಡಳಿತ ಖಾತ್ರಿಗೊ ಳಿಸುವ ಉದ್ದೇಶದಿಂದ ಪಿಡಿಒ ವರ್ಗಾವಣೆ ಪ್ರಕ್ರಿಯೆಯಲ್ಲಿ ತಿದ್ದುಪಡಿಗಳನ್ನು ತಂದಿದೆ. ಅದರಂತೆ ಈ ವರ್ಷದಿಂದ ಪಿಡಿಓಗಳ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದೆ.
ಕರ್ನಾಟಕ ಪಂಚಾಯತ್ರಾಜ್ ಆಯುಕ್ತಾಲಯವು ಪಿಡಿಓಗಳ ವರ್ಗಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದು, ಜಿಲ್ಲೆಯಲ್ಲಿ ಐದು ವರ್ಷಗಳು ಮತ್ತು ಅದಕ್ಕಿಂತ ಹೆಚ್ಚು ಅವಧಿ ಪೂರೈಸಿದ 49 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿದ್ದು ಅರ್ಹ ಪಿಡಿಓಗಳ ಪಟ್ಟಿಯನ್ನು ತಯಾರಿಸಲಾಗಿದೆ.
ಕುಂದಾಪುರದಲ್ಲಿ 21 ಪಿಡಿಓ: ಒಂದೇ ಗ್ರಾಪಂನಲ್ಲಿ ನಿರಂತರ ಐದು ವರ್ಷಗಳ ಸೇವೆ ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹರಾದ 49 ಮಂದಿ ಪಿಡಿಓಗಳಲ್ಲಿ ಕುಂದಾಪುರ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಅಂದರೆ 21 ಪಿಡಿಓಗಳಿದ್ದಾರೆ.
ಕುಂದಾಪುರ ತಾಲೂಕಿನ ಹಾಲಾಡಿ, ಹೊಂಬಾಡಿ-ಮಂಡಾಡಿ, ತಲ್ಲೂರು, ತ್ರಾಸಿ, ಆನಗಳ್ಳಿ, ಬೀಜಾಡಿ, ಆಜ್ರಿ, ಕುಂಭಾಶಿ, ಶಂಕರನಾರಾಯಣ, ಗುಜ್ಜಾಡಿ, ಬಳ್ಳೂರು, ಹಂಗಳೂರು, ಹಾರ್ದಳ್ಳಿ-ಮಂಡಳ್ಳಿ, ತೆಕ್ಕಟ್ಟೆ, ಗುಲ್ವಾಡಿ, ಹೊಸಂಗಡಿ, ಇಡೂರು ಕುಂಞಾಡಿ, ಹೆಂಗವಳ್ಳಿ, ಕೊರ್ಗಿ, ಮೊಳಹಳ್ಳಿ ಕೆರಾಡಿ ಗ್ರಾ.ಪಂ.ಗಳ 21 ಪಿಡಿಓಗಳು, ಬ್ರಹ್ಮಾವರ ತಾಲೂಕಿನ ಆವರ್ಸೆ, ಪಾಂಡೇಶ್ವರ, ವಡ್ಡರ್ಸೆ, ಯಾಡ್ತಾಡಿ, ಬಾರ್ಕೂರು, ಹೆಗ್ಗುಂಜೆ, ಬಿಲ್ಲಾಡಿ, ಚೇರ್ಕಾಡಿ, ಕಾಡೂರು, ಕೋಟತಟ್ಟು, ಹನೆಹಳ್ಳಿ, ಹಾವಂಜೆ ಗ್ರಾಪಂಗಳ 12 ಪಿಡಿಓಗಳು, ಬೈಂದೂರು ತಾಲೂಕಿನ ಮರವಂತೆ, ಹೆರೂರು, ನಾವುಂದ, ನಾಡ ಗ್ರಾ.ಪಂ.ಗಳ ನಾಲ್ಕು ಪಿಡಿಓಗಳು ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ, ಮರ್ಣೆ, ನೀರೆ, ಬೈಲೂರು ಗ್ರಾ.ಪಂ.ನ ನಾಲ್ಕು ಪಿಡಿಓಗಳು, ಹೆಬ್ರಿ ತಾಲೂಕಿನ ಬೆಳ್ಳೆ, ಕಾಪು ತಾಲೂಕಿನ ಶಿರಿಯಾರ, ಮತ್ತು ಉಡುಪಿ ತಾಲೂಕಿನ ಕೆಮ್ಮಣ್ಣು, ಅಂಬಲಪಾಡಿ, ಆತ್ರಾಡಿ, ಬೊಮ್ಮರಬೆಟ್ಟು ಬಡನಿಡಿಯೂರು, 80 ಬಡಗಬೆಟ್ಟು ಆರು ಗ್ರಾ.ಪಂಗಳ ಪಿಡಿಓಗಳು ವರ್ಗಾವಣೆಗೆ ಅರ್ಹರಾಗಿದ್ದಾರೆ.
22 ಪಿಡಿಓ ಹುದ್ದೆಗಳು ಖಾಲಿ: ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿಗೊಳಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ.
ಜಿಲ್ಲೆಯ 22 ಖಾಲಿ ಹುದ್ದೆಗಳ ಪೈಕಿ ಅತೀ ಹೆಚ್ಚು ಹುದ್ದೆಗಳು ಕುಂದಾಪುರ ತಾಲೂಕಿನಲ್ಲಿವೆ. ಇಲ್ಲಿ ಬೇಳೂರು, ಗಂಗೊಳ್ಳಿ, ಗೋಪಾಡಿ, ಹಟ್ಟಿಯಂಗಡಿ, ಹೆಮ್ಮಾಡಿ, ಹೊಸೂರು, ಕಟ್ಬೆಲ್ಲೂರು, ಕಾವ್ರಾಡಿ, ಕೋಟೇಶ್ವರ ಮತ್ತು ಉಳ್ಳೂರು ಗ್ರಾಮ ಪಂಚಾಯತ್ಗಳಲ್ಲಿ ಪಿಡಿಓ ಹುದ್ದೆಗಳು ಖಾಲಿ ಇವೆ.
ಕಾರ್ಕಳ ತಾಲೂಕಿನಲ್ಲಿ ಕಡ್ತಲ, ಮಾಳ, ಮುಂಡೂರು, ನಿಟ್ಟೆ ಗ್ರಾ.ಪಂ.ನಲ್ಲಿ 4 ಹುದ್ದೆಗಳು, ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರಿ, ಮುದರಂಗಡಿಯಲ್ಲಿ 3 ಹುದ್ದೆಗಳು ಖಾಲಿ ಇವೆ. ಬ್ರಹ್ಮಾವರ ತಾಲೂಕಿನ ಕೋಟ ಮತ್ತು ಶಿರಿಯಾರ, ಹಾಗೂ ಹೆಬ್ರಿ ತಾಲೂಕಿನ ಕುಚೂರು ಮತ್ತು ಮುದ್ರಾಡಿ ಗ್ರಾ.ಪಂ.ಗಳಲ್ಲಿ ತಲಾ 2 ಹುದ್ದೆಗಳು ಖಾಲಿ ಯಾಗಿವೆ. ಬೈಂದೂರು ತಾಲೂಕಿನ ಉಪ್ಪುಂದದಲ್ಲಿ 1 ಹುದ್ದೆ ಖಾಲಿಯಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹಂತ ಹಂತವಾಗಿ ಕೌನ್ಸಿಲಿಂಗ್ ನಡೆಸಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪಿಡಿಒಗಳು ರಾಜ್ಯ ಕೇಡರ್ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಹಿಂದೆ ಜಿಲ್ಲಾ ಮಟ್ಟದೊಳಗೆ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ಪಿಡಿಒಗಳ ವರ್ಗಾವಣೆ ಪ್ರಕ್ರಿಯೆ ರಾಜ್ಯಕ್ಕೆ ವಿಸ್ತರಣೆಗೊಂಡಿದೆ. ಈ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ 5 ವರ್ಷ ಪೂರ್ಣಗೊಳಿಸಿದ ಪಿಡಿಒ ಅವರಿಗೆ ವರ್ಗಾವಣೆ ಕಡ್ಡಾಯವಾಗಿದೆ. ರಾಜ್ಯ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಹೊರ ಜಿಲ್ಲೆಯವರು ಇಲ್ಲಿಗೆ ಬರಬಹುದು. ಇಲ್ಲಿಯವರು ಹೊರ ಜಿಲ್ಲೆಗಳಿಗೆ ಹೋಗಬಹುದು’
- ಪ್ರತೀಕ್ ಬಾಯಲ್, ಸಿಇಓ, ಉಡುಪಿ ಜಿ.ಪಂ







