ಉಡುಪಿಯಲ್ಲಿ ವಿಶ್ವ ದೇವಾಡಿಗ ಮಹಾ ಅಧಿವೇಶನ: ಜು.5ರಂದು ಅಧಿವೇಶನ ಕಾರ್ಯಾಲಯ ಉದ್ಘಾಟನೆ

ಉಡುಪಿ, ಜು.4: ಉಡುಪಿ ಜಿಲ್ಲಾ ದೇವಾಡಿಗ ಮಹಾಮಂಡಲದ ವತಿಯಿಂದ ಮುಂದಿನ ಡಿಸೆಂಬರ್ ತಿಂಗಳ 12ರಂದು ಚಿಟ್ಪಾಡಿಯ ಬಯಲು ರಂಗಮಂದಿರದಲ್ಲಿ ವಿಶ್ವ ದೇವಾಡಿಗ ಮಹಾ ಅಧಿವೇಶವನ್ನು ಆಯೋಜಿಸಲಾಗಿದೆ ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ತಿಳಿಸಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಾಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಈ ಅಧಿವೇಶನ ನಡೆಯಲಿದೆ ಎಂದು ಅವರು ಹೇಳಿದರು.
ಮಹಾಧಿವೇಶನದ ಪೂರ್ವಭಾವಿ ಸಿದ್ಧತೆಗಳಿಗಾಗಿ ನಾಳೆ ಜು.5ರಂದು ರವಿವಾರ ಬೆಳಗ್ಗೆ 9 ಗಂಟೆಗೆ ಅಧಿವೇಶನದ ಕಾರ್ಯಾಲಯವನ್ನು ಚಿಟ್ಪಾಡಿ ಯಲ್ಲಿರುವ ದೇವಾಡಿಗ ಸೇವಾ ಸಂಘ ಇಲ್ಲಿ ಉದ್ಘಾಟಿಸಲಾಗುತ್ತಿದೆ ಎಂದೂ ಅವರು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯ, ದೇಶಗಳಿಂದ ಸುಮಾರು 20ರಿಂದ 25 ಸಾವಿರಕ್ಕೂ ಅಧಿಕ ಮಂದಿ ದೇವಾಡಿಗ ಸಮಾಜದವರು ಈ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಗಳಲ್ಲದೇ ಕೇರಳದ ಕಾಸರಗೋಡು ಹಾಗೂ ಇತರ ಜಿಲ್ಲೆಗಳಲ್ಲಿ ಶತಮಾನಗಳಿಂದ ನೆಲೆಸಿರುವ ಹಿಂದುಳಿದ ಸಮಾಜ ನಮ್ಮದಾಗಿದೆ ಎಂದವರು ಹೇಳಿದರು.
ದೇವಾಡಿಗರು ವೃತ್ತಿಯಲ್ಲಿ ಕೃಷಿ ಕಾರ್ಮಿಕರಾಗಿದ್ದು, ದೇವಸ್ಥಾನ, ಧಾರ್ಮಿಕ ಕೇಂದ್ರಗಳ ಬಳಿ ನೆಲೆಸಿ ದೇವಸ್ಥಾನ ಗಳಲ್ಲಿ ವಾದ್ಯ, ವಾಲಗ ಹಾಗೂ ಸಂಗೀತ ಸೇವೆಯೊಂದಿಗೆ ಶುಚಿತ್ವದ ಸೇವೆಯನ್ನು ನಡೆಸುವ ಸಮುದಾಯ ವಾಗಿದೆ. ದೇವಾಡಿಗ ಸಮಾಜದಲ್ಲಿ ಸೇರಿಗಾರ, ಮೊಯ್ಲಿ, ದೇವಾಡಿಗ ಹಾಗೂ ಶೇರಿಗಾರ ಪ್ರಮುಖ ಉಪನಾಮ ಗಳಿದ್ದು, ಸರಕಾರದ ಅಧಿಕೃತ ಅಂಕಿಅಂಶಗಳಂತೆ 5 ಲಕ್ಷ ಜನಸಂಖ್ಯೆ ಇದ್ದರೂ, ನಮ್ಮ ಅಂದಾಜಿನಂತೆ ಸುಮಾರು 8 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ ಎಂದು ಧರ್ಮಪಾಲ ತಿಳಿಸಿದರು.
ಮಹಾಧಿವೇಶನದಲ್ಲಿ ದೇವಾಡಿಗ ಸಮಾಜದ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಮುಖ್ಯವಾಗಿ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮದ ಸ್ಥಾಪನೆ, ರಾಜ್ಯ ಬಜೆಟ್ನಲ್ಲಿ ಸಮುದಾಯಕ್ಕೆ ಪ್ರತ್ಯೇಕ ವಿಶೇಷ ಅನು ದಾನ ಮೀಸಲಿಡುವ ಜೊತೆಗೆ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸು ವಂತೆ ಮನವಿ ಸಲ್ಲಿಸಲಾಗುವುದು ಎಂದರು.
2017-18ರಲ್ಲಿ ದೇವಾಡಿಗರ ಧಾರ್ಮಿಕ ಕೇಂದ್ರವೆಂದು ಗುರುತಿಸಲಾಗುವ ಶ್ರೀ ಏಕನಾಥೇಶ್ವರಿ ದೇವಸ್ಥಾನವನ್ನು ಬಾರಕೂರಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಾಡಿಗ ಸಮಾಜದ ಬಲವರ್ಧನೆಗಾಗಿ 2023ರಲ್ಲಿ ವಿಶ್ವ ದೇವಾ ಡಿಗ ಮಹಾಮಂಡಳ ಸ್ಥಾಪನೆಯಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ನಮ್ಮ ಸಮಾಜದ ಪ್ರಮುಖ ರಾಜಕೀಯ ಧುರೀಣರಾಗಿದ್ದಾರೆ ಎಂದರು.
ಈ ಬಾರಿಯ ಮಹಾಧಿವೇಶನದ ಮೂಲಕ ದೇವಾಡಿಗ ಸಮಾಜದ ನ್ಯಾಯಸಮ್ಮತ ಬೇಡಿಕೆಗಳನ್ನು ಮತ್ತೊಮ್ಮೆ ಸರಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದ ಅವರು, ಮಹಾಧಿವೇಶಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು. ಅಲ್ಲದೇ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ರಾಜಕೀಯ ಧುರೀಣರು ಸಮಾವೇಶದಲ್ಲಿ ಬಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಶ್ವ ದೇವಾಡಿಗ ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ, ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಜನಾರ್ಧನ ಪಡುಪಣಂಬೂರು, ಜೊತೆ ಕಾರ್ಯದರ್ಶಿ ಯಾದವ ದೇವಾಡಿಗ, ಕೋಶಾಧಿಕಾರಿ ಸುರೇಶ್ ದೇವಾಡಿಗ, ಮುಂಬೈ ದೇವಾಡಿಗ ಮಹಾ ಮಂಡಳ ಅಧ್ಯಕ್ಷ ರವಿ ಎಸ್. ದೇವಾಡಿಗ, ವಿಶ್ವ ದೇವಾಡಿಗ ಮಹಾಮಂಡಳ ಸಮಿತಿ ಸದಸ್ಯ ಚೆನ್ನಪ್ಪ ಮೊಯಿಲಿ ಉಪಸ್ಥಿತರಿದ್ದರು.






