ಚಿಪ್ಪು ಹಂದಿಗೆ ಜೀವದಾನ: 50 ಅಡಿ ಬಾವಿಯಿಂದ ರಕ್ಷಣೆ

ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಯಲ್ಲಿ ಗುರುವಾರ ಸಂಜೆ 50 ಅಡಿ ಆಳದ ಬಾವಿಗೆ ಬಿದ್ದುಬಿಟ್ಟಿದ್ದ ಅಪರೂಪದ ಚಿಪ್ಪು ಹಂದಿ ಅನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರ ದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಸಂಜೆಯ ವೇಳೆಗೆ ಈ ಘಟನೆ ಬೆಳಕಿಗೆ ಬಂದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿತಿನ್ ಹಿರಿಯಡ್ಕ ಅವರು ತಕ್ಷಣವೇ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರಿಗೆ ವಿಷಯ ತಿಳಿಸಿದರು. ತಕ್ಷಣ ಸ್ಪಂದಿಸಿದ ಕುಲಾಲ್ ಅವರು ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕರೆದೊಯ್ದರು.
ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ, ನೀರೆಯ ಸುನಿಲ್ ಎಂಬವರು ಬಾವಿಗೆ ಇಳಿದು 20 ಅಡಿ ಆಳದಲ್ಲಿದ್ದ ಚಿಪ್ಪು ಹಂದಿಯನ್ನು ಹಿಡಿದು ಮೇಲಕ್ಕೆತ್ತಿದರು. ಈ ಕಾರ್ಯಾಚರಣೆ ಯಲ್ಲಿ ಉಪವಲಯ ಅರಣ್ಯಾಧಿಕಾರಿ ವೀರೆಶ್, ಅರಣ್ಯ ರಕ್ಷಕರಾದ ಪ್ರವೀಣ್, ಶ್ರೀಧರ್ ನರೇಗಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿಪ್ಪು ಹಂದಿ ಒಂದು ಸಸ್ತನಿ ಆಗಿದ್ದು, ಮಣ್ಣು ಮತ್ತು ಮರದ ಪೊಟರೆಗಳಲ್ಲಿ ವಾಸವಿದ್ದು, ಇರುವೆ ಮತ್ತು ಗೆದ್ದಲುಗಳನ್ನು ಆಹಾರವನ್ನಾಗಿಸಿಕೊಂಡು ಬದುಕುತ್ತದೆ. ಇದು ಏಶ್ಯಾ ಮತ್ತು ಯುರೋಪ್ ಖಂಡದಲ್ಲಿ ಕಂಡುಬರುವ ಅಪರೂಪದ ಪ್ರಾಣಿ. ಇಲ್ಲಿ ಹಿಡಿದ ಚಿಪ್ಪು ಹಂದಿಯನ್ನು ಸುಸ್ಥಿತಿಯಲ್ಲಿ ಬಯಲು ಪ್ರದೇಶದ ರಕ್ಷಿತ ಅರಣ್ಯಕ್ಕೆ ಸುರಕ್ಷಿತ ವಾಗಿ ಬಿಡಲಾಯಿತು.







