ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಶೇ.75ರಿಂದ 95ರಷ್ಟು ಬಡ ಮಹಿಳೆಯರ ಜೀವನ ಮಟ್ಟ ಸುಧಾರಣೆ: ಸಚಿವೆ ಹೆಬ್ಬಾಳ್ಕರ್

ಉಡುಪಿ, ನ.1: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ದೊರಕಿದೆ. ಇದರಿಂದ ರಾಜ್ಯದಲ್ಲಿ ಶೇ.70ರಿಂದ 95ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ದಿನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಶಕ್ತಿ ಹಾಗೂ ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮೀ ಯೋಜನೆಯಿಂದ ನೇರವಾಗಿ ಸಿಗುವ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದು, ಇದರಿಂದ ಶೇ.88ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಲು ಸಾಧ್ಯವಾಗಿದೆ. ಹೀಗಾಗಿ ಶೇ.83ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿರುವ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ ಎಂದವರು ವಿವರಿಸಿದರು.
ಯುವ ಜನಾಂಗಕ್ಕೆ ಯುವನಿಧಿ ಯೋಜನೆ ಆರ್ಥಿಕ ಬಲ ನೀಡಿದೆ. ನಮ್ಮ ಸರಕಾರ ಇದುವರೆಗೂ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದೆ ಎಂದು ಹೇಳಿದರು.
ನ.19ರಿಂದ ಅಕ್ಕಪಡೆ: ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು ಅಕ್ಕ ಪಡೆಗಳನ್ನು ಸ್ಥಾಪಿಸ ಲಾಗುತಿದ್ದು, ನ.19ರಂದು ಬೆಂಗಳೂರಿ ನಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ನಂತರದ ಹಂತದಲ್ಲಿ ಉಡುಪಿ, ಮೈಸೂರು, ಮಂಗಳೂರು ಹಾಗೂ ಬೆಳಗಾವಿಯಲ್ಲೂ ಅಕ್ಕಪಡೆ ಅಸ್ತಿತ್ವಕ್ಕೆ ಬರಲಿವೆ ಎಂದು ಹೆಬ್ಬಾಳ್ಕರ್ ತಿಳಿಸಿದರು.
ಇಂಡಿಯಾ ಫಾರ್ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂ.1 ಸ್ಥಾನದಲ್ಲಿದೆ ಎಂಬ ವರದಿ ರಾಜ್ಯದ ಘನತೆ ಯನ್ನು ಹೆಚ್ಚಿಸಿದೆ.ರೈತ ಬಾಂಧವರ ಭೂಮಿಯ ಮಾಲೀಕತ್ವದ ದಾಖಲೆಗಳ ನಿರ್ವಹಣೆಗೆ ನನ್ನ ಭೂಮಿ, ಪೋಡಿ ಆಂದೋಲನ, ಇ-ಪೌತಿ ಯೋಜನೆ, ಇ-ಚಾವಡಿ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವೆ ಹೇಳಿದರು.
ಲಿಂಗಾನುಪಾತನದಲ್ಲಿ ಜಿಲ್ಲೆಗೆ ಅಗ್ರಸ್ಥಾನ: ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೆ ಅಧಿಕವಾಗಿದ್ದು, ಪ್ರಸಕ್ತ ಲಿಂಗಾನುಪಾತದಲ್ಲಿ 1000 ಪುರುಷರಿಗೆ 1004 ಮಹಿಳೆಯರಿದ್ದಾರೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಇಂದಿಗೂ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿರುವುದು ಜಿಲ್ಲೆಯ ಹೆಗ್ಗಳಿಕೆ. ಇದು ಜಗತ್ತಿನಲ್ಲೇ ಅತೀ ಅಪರೂಪದ ಸಂಗತಿಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಜಿಲ್ಲೆಯ ಪ್ರಮುಖ ಕಲೆಯಾದ ಯಕ್ಷಗಾನ ಬಯಲಾಟ, ತಾಳಮದ್ದಳೆಗಳು ಜಿಲ್ಲೆಯ ಜನರ ಸಾಂಸ್ಕೃತಿಕ ಬದುಕಿನ ಭಾಗವಾಗುವುದರ ಜೊತೆಗೆ ಅಂತಾರಾಷ್ಟ್ರೀಯ ಕಲೆಯಾಗಿ ಆಕರ್ಷಣೆ ಪಡೆದಿವೆ. ಪಾಡ್ದನ, ಭೂತಕೋಲ, ಆಟಿ ಕಳಂಜ, ನಾಗಮಂಡಲ ಮುಂತಾದ ಜಾನಪದ ಸಂಸ್ಕೃತಿ ಈ ಮಣ್ಣಿನಲ್ಲಿ ರೂಪತಳೆದ ಆರಾಧನ ಕಲೆಗಳಾಗಿವೆ ಎಂದು ಹೇಳಿದರು.
ಸ್ವಾತಂತ್ರ್ಯಾ ನಂತರ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರ ಬದಲಾವಣೆ ಕಂಡಿದೆ. ಜಿಲ್ಲೆಯ ಜನತೆ ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಅರಸಿ, ಮಧ್ಯ ಪ್ರಾಚ್ಯ ಸೇರಿದಂತೆ ಹಲವು ದೇಶಗಳಿಗೆ ಹಾಗೂ ಮುಂಬೈ ಮುಂತಾದ ರಾಜ್ಯಗಳಲ್ಲಿ ನೆಲೆಸಿ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುವುದರ ಜೊತೆಗೆ ಆರ್ಥಿಕ ಸಫಲತೆಯನ್ನು ಹೊಂದಿರು ವುದು ಹೆಮ್ಮೆಯ ವಿಷಯ. ಉಡುಪಿ ಜಿಲ್ಲೆಯ ಜನತೆ ವಿಶಿಷ್ಟ ಆಚಾರ -ವಿಚಾರ, ಪರಂಪರೆ, ಸಂಸ್ಕೃತಿಯನ್ನು ಹೊಂದುವುದರ ಜೊತೆಗೆ ಸಮಾಜದ ಒಳಿತಿಗಾಗಿ ಸಮಾಜಸೇವಾ ಕಾರ್ಯದಲ್ಲೂ ಮುಂದಿದ್ದಾರೆ ಎಂದವರು ಪ್ರಶಂಸಿಸಿದರು.
ಕಳೆದ ತಿಂಗಳು ನಾನೇ ಉದ್ಘಾಟಿಸಿದ ನೀರೆ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಸರಕಾರದ ಅನುದಾನದ ಜೊತೆಗೆ ಸಾರ್ವಜನಿಕ ದೇಣಿಗೆಯಿಂದ ತಾಲೂಕು ಮಟ್ಟದ ಕಟ್ಟಡ ರೀತಿಯಲ್ಲಿ ಸುಸಜ್ಜಿತವಾದ ಗ್ರಾಮ ಪಂಚಾಯತ್ ನಿರ್ಮಾಣ ಮಾಡಿರುವುದು ಇದಕ್ಕೆ ಸಾಕ್ಷಿ. ಅದೇ ರೀತಿ ಕಳೆದವಾರ ಜಿಲ್ಲಾ ಆಸ್ಪತ್ರೆಗೆ ದಾನಿಗಳ ಕುಟುಂಬವೊಂದು 25 ಲಕ್ಷ ರೂ. ಮೊತ್ತದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನು ದೇಣಿಗೆಯಾಗಿ ನೀಡಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಗಳು ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಿ ರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದರು.
ಕ್ರೀಡೆಗೆ ಪ್ರೋತ್ಸಾಹ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗದು ಪುರಸ್ಕಾರವನ್ನು ಹೆಚ್ಚಿಸಲಾಗಿದ್ದು, ಚಿನ್ನದ ಪದಕ ವಿಜೇತರಿಗೆ 7 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 5 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 3 ಲಕ್ಷ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಬಜೆಟ್ನಲ್ಲೂ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಅನುದಾನ, ಬೆಂಬಲವನ್ನು ನೀಡಲಾಗುವುದು. ನಮ್ಮ ರಾಜ್ಯ ಸಿಲಿಕಾನ್ ರಾಜಧಾನಿಯಾಗಿದೆ. ಮುಂದಿನ ದಿನಗಳಲ್ಲಿ ನಾವು ವಿಶ್ವದ ನಾವೀನ್ಯತಾ ರಾಜಧಾನಿಯಾಗುವತ್ತ ಸಾಗುತ್ತಿದ್ದೇವೆ ಎಂದರು.
2024-29ರ ನಮ್ಮ ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿ ಅನುಷ್ಠಾನ ಗೊಂಡಿದ್ದು, ರಾಜ್ಯವನ್ನು ಭಾರತದ ನಂ. 1 ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಇದು ನಮ್ಮ ಕಾರ್ಯತಂತ್ರದ ನೀಲನಕ್ಷೆಯಾಗಿದೆ. 1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 8 ಸಾವಿರ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿ ದ್ದೇವೆ. ಕರಾವಳಿ ಆಕರ್ಷಣೆ ಯನ್ನು ಹೆಚ್ಚಿಸಲು 200 ಕೋಟಿ ರೂ. ಮೀಸಲಿಡಲಾಗಿದೆ ಎಂದೂ ಅವರು ಹೇಳಿದರು.
ಅಂತರ್ಜಲ ಮಿತಬಳಕೆ ಮತ್ತು ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನೀರಿದ್ದರೆ ನಾಳೆ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಮಳೆ ಮತ್ತು ಪ್ರವಾಹದಿಂದಾ ಗುತ್ತಿದ್ದ ಬೆಳೆಹಾನಿಯ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಎನ್ಡಿಆರ್ಎಫ್ ನಿಯಮಾವಳಿಯ ಅನ್ವಯ ನೀಡುತ್ತಿದ್ದ ಪರಿಹಾರ ಮೊತ್ತಕ್ಕೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ಹೆಕ್ಟೇರಿಗೆ 8,500 ರೂ. ನೀಡುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಅಂಗನವಾಡಿಗೆ 50ವರ್ಷ: ರಾಜ್ಯದಲ್ಲಿ ಅಂಗನವಾಡಿ ಪ್ರಾರಂಭವಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವುದನ್ನು ಜಾರಿ ಮಾಡಲು ನಿಯಮ ರೂಪಿಸಲಾಗಿದೆ. ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳು 1,000 ರೂ.ಗಳ ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಇದು ದೇಶದಲ್ಲೇ ಪ್ರಥಮ ಎಂದರು.
ಇದಕ್ಕೂ ಮೊದಲು ಸಚಿವರು ಗೌರವ ರಕ್ಷೆ ಸ್ವೀಕರಿಸಿ, ಆಕರ್ಷಕ ಪಥ ಸಂಚಲನ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಲ್ಲಾ ಪಂಚಾಯತ್ ಪ್ರತೀಕ್ ಬಾಯಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಡುಪಿಯ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಅಜ್ಜರಕಾಡು ಮೈದಾನದವರೆಗೆ ಸಾಗಿ ಬಂತು.







