ಉಡುಪಿ: ಬಿರುಸು ಕಳೆದುಕೊಂಡ ಮಳೆ; 8 ಮನೆಗಳಿಗೆ ಹಾನಿ
![ಉಡುಪಿ: ಬಿರುಸು ಕಳೆದುಕೊಂಡ ಮಳೆ; 8 ಮನೆಗಳಿಗೆ ಹಾನಿ ಉಡುಪಿ: ಬಿರುಸು ಕಳೆದುಕೊಂಡ ಮಳೆ; 8 ಮನೆಗಳಿಗೆ ಹಾನಿ](https://www.varthabharati.in/h-upload/2024/06/11/1271505-whatsapp-image-2022-07-11-at-10625-pm.webp)
ಉಡುಪಿ, ಜೂ.11: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಬಿರುಸು ಕಳೆದುಕೊಂಡಿದೆ. ಇಂದು ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದ್ದು, ಒಂದೆರಡು ಬಾರಿ ಸೂರ್ಯನೂ ಆಕಾಶದಲ್ಲಿ ಕಾಣಿಸಿಕೊಂಡು ಮರೆಯಾದ. ದಿನದಲ್ಲಿ ಗಾಳಿ-ಮಳೆಯಿಂದ ಒಟ್ಟು ಎಂಟು ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು 2.50 ಲಕ್ಷರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ರಾಮ ದೇವಾಡಿಗರ ಮನೆ ಗೋಡೆ ಸತತ ಮಳೆಯಿಂದ ಭಾಗಶ: ಕುಸಿದಿದ್ದು 45 ಸಾವಿರ, ಬಸ್ರೂರು ಗ್ರಾಮದ ಚಂದ್ರಕಲಾ ಕಿಣಿ ಇವರ ಮನೆಎ 25 ಸಾವಿರ ಹಾಗೂ ಕಾವ್ರಾಡಿ ಗ್ರಾಮದ ಸಲಿಮಾಬಿ ಇವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಬಾಬು ನಾಯ್ಕ ಇವರ ಮನೆಗೆ ಸಿಡಿಲು ಬಡಿದು ಹಾಗೂ ಗಾಳಿಯಿಂದ ಭಾಗಶ: ಹಾನಿಯಾಗಿದೆ. ಒಟ್ಟಾರೆಯಾಗಿ ಅಪಾರ ನಷ್ಟವಾಗಿದೆ. ಕಾಪು ತಾಲೂಕಿನ ನಡ್ಸಾಲು ಗ್ರಾಮದ ನಝೀರ್ ಎಂಬವರ ಮನೆ ಮೇಲೆ ಮರ ಬಿದ್ದು 25,000ರೂ. ನಷ್ಟವಾಗಿರುವ ಬಗ್ಗೆ ಮಾಹಿತಿ ಬಂದಿದೆ.
ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ಅಮೃತಕಲಾ ರೈ ಇವರ ವಾಸ್ತ್ಯದ ಪಕ್ಕಾ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 45,000ರೂ., ಹಿಲಿಯಾಣ ಗ್ರಾಮದ ಮೊಹಮ್ಮದ್ ಶಬ್ಬೀರ್ ಎಂಬವರ ಮನೆಯಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ನಾಲ್ಕೂರು ಗ್ರಾಮದ ಪಾಂಡು ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು 40,000ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
35.5ಮಿ.ಮೀ.ಮಳೆ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 35.5ಮಿ.ಮೀ. ನಷ್ಟು ಸರಾಸರಿ ಮಳೆ ಯಾಗಿದೆ. ಕಾಪುವಿನಲ್ಲಿ 51.9ಮಿ.ಮೀ. ಮಳೆಯಾದರೆ ಬ್ರಹ್ಮಾವರದಲ್ಲಿ 50.5, ಕುಂದಾಪುರದಲ್ಲಿ 39.4, ಕಾರ್ಕಳದಲ್ಲಿ 37.6, ಉಡುಪಿಯಲ್ಲಿ 35.2, ಹೆಬ್ರಿಯಲ್ಲಿ 23.9 ಹಾಗೂ ಬೈಂದೂರಿನಲ್ಲಿ 19.5 ಮಿ.ಮೀ. ಮಳೆ ಯಾಗಿದೆ.
ಮುಂದಿನ 48ಗಂಟೆಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಂಭವವಿದ್ದು, 64.5ರಿಂದ 115.5ರಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.13ರಂದು ಗುಡುಗು-ಸಿಡಿಲು ಸಹಿತ ವೇಗದ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.