ದ.ಕ.ಸಹಕಾರಿ ಹಾಲು ಒಕ್ಕೂಟಕ್ಕೆ ಚುನಾವಣೆ: ಸಹಕಾರಿ ಭಾರತಿಯಿಂದ ಉಡುಪಿ 8 ಸ್ಥಾನಗಳಿಗೆ ಸ್ಪರ್ಧೆ
ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ ಮೋಸ: ಆರೋಪ

ಉಡುಪಿ, ಎ.22: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ ಇದೇ ಎ.26ರಂದು ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ ಇರುವ ಎಲ್ಲಾ ಎಂಟು ಸ್ಥಾನಗಳಿಗೆ ಸಹಕಾರ ಭಾರತಿ, ಬಿಜೆಪಿ ಯೊಂದಿಗೆ ಸೇರಿ ಸ್ಪರ್ಧಿಸುತ್ತಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಭಾರತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಒಟ್ಟು 24 ಸ್ಥಾನಗಳಿಗೆ ಎ.26ರಂದು ಚುನಾವಣೆ ನಡೆಯಲಿದೆ. ಒಟ್ಟಾರೆಯಾಗಿ 715 ಮಂದಿ ಮತದಾರರಿದ್ದು, ಇವರು ಮಂಗಳೂರು ಕುಲಶೇಕರದಲ್ಲಿರುವ ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಮಾಡಲು ಅವಕಾಶವಿದೆ ಎಂದರು.
ಇದರಲ್ಲಿ ಉಡುಪಿ ಜಿಲ್ಲೆಯ ಒಟ್ಟು 325 ಮಂದಿ ಮತದಾರರು ಏಳು ಸಾಮಾನ್ಯ ಸ್ಥಾನ ಹಾಗೂ ಒಂದು ಮಹಿಳಾ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಬೇಕಿದೆ. ಸಾಮಾನ್ಯ ಕ್ಷೇತ್ರಕ್ಕೆ 21 ಮಂದಿ ಹಾಗೂ ಮಹಿಳಾ ಮೀಸಲು ಕ್ಷೇತ್ರಕ್ಕೆ ಮೂವರು ಸ್ಪರ್ಧಾಕಣದಲ್ಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ನಾಯಕ್ ತಿಳಿಸಿದರು.
ಸಹಕಾರ ಭಾರತಿಯ ಜಿಲ್ಲೆಯ ಎಲ್ಲಾ 8 ಸ್ಥಾನಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಹಕಾರ ಭಾರತಿ ಬೆಂಬಲದೊಂದಿಗೆ ಕುಂದಾಪುರ ಉಪವಿಭಾಗ ಕ್ಷೇತ್ರದ 7 ಸಾಮಾನ್ಯ ಸ್ಥಾನಗಳಿಗೆ ಕಾರ್ಕಳ ತಾಲೂಕಿನಿಂದ ಮೋಹನದಾಸ ಅಡ್ಯಂತಾಯ, ಹೆಬ್ರಿ ತಾಲೂಕಿನಿಂದ ಭೋಜ ಪೂಜಾರಿ, ಕಾಪು ತಾಲೂಕಿ ನಿಂದ ಅಶೋಕ್ ರಾವ್, ಉಡುಪಿ ತಾಲೂಕಿನಿಂದ ಹೆರ್ಗ ದಿನಕರ ಶೆಟ್ಟಿ, ಕುಂದಾಪುರ ತಾಲೂಕಿ ನಿಂದ ಕಾಡೂರು ಸುರೇಶ್ ಶೆಟ್ಟಿ, ಬೈಂದೂರು ತಾಲೂಕಿನಿಂದ ಸುಬ್ಬಣ್ಣ ಶೆಟ್ಟಿ ಮತ್ತು ಟಿ.ವಿ.ಪ್ರಾಣೇಶ ಯಡಿಯಾಶ್ ಸ್ಪರ್ಧಿಸಿದ್ದಾರೆ.
ಉಡುಪಿ ಜಿಲ್ಲೆಯ ಮಹಿಳಾ ಮೀಸಲು ಕ್ಷೇತ್ರದಿಂದ ಬ್ರಹ್ಮಾವರ ತಾಲೂಕಿನ ಶಾಂತಾ ಎಸ್. ಭಟ್ ಸ್ಪರ್ಧಿಸುತಿದ್ದಾರೆ. ಇವರೆಲ್ಲರಿಗೂ ಜಿಲ್ಲೆಯ ಮತದಾರರು ಎ.26ರ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು.
ಸಹಕಾರ ಭಾರತಿಯಿಂದ ಕಳೆದ 18 ವರ್ಷ ಒಕ್ಕೂಟದ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಕೆಎಂಎಫ್ ಪ್ರತಿನಿಧಿಯಾಗಿ, ಸ್ಕ್ವಾಡ್ ಸಂಸ್ಥೆ ಅಧ್ಯಕ್ಷರಾಗಿ ಅವಕಾಶ ಪಡೆದಿದ್ದ ಕೊಡವೂರು ರವಿರಾಜ್ ಹೆಗ್ಡೆ ಅವರು ಈ ಬಾರಿ ಸಹಕಾರಿ ಭಾರತಿ ಸಂಘಟನೆಗೆ ದ್ರೋಹ ಬಗೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತಿದ್ದಾರೆ ಎಂದವರು ದೂರಿದರು.
ಕಾಂಗ್ರೆಸ್ ಬೆಂಬಲಿತರಾಗಿ ರವಿರಾಜ ಹೆಗ್ಡೆ, ಮಮತಾ ಶೆಟ್ಟಿ ಅಲ್ಲದೇ ಕಮಲಾಕ್ಷ ಹೆಬ್ಬಾರ್ ಹಾಗೂ ಸ್ಮಿತಾ ಆರ್. ಶೆಟ್ಟಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಾಕಣದಲ್ಲಿದ್ದಾರೆ. ಮತದಾರರು ಗೊಂದಲಕ್ಕೊಳಗಾಗದೇ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಬೋಳ ಸದಾಶಿವ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೇಶ್ ನಾಯಕ್ ಉಪಸ್ಥಿತರಿದ್ದರು.







