10 ಲಕ್ಷ ರೂ. ವೆಚ್ಚದ ಸಂತೆಕಟ್ಟೆ ಒಣಮೀನು ಮಾರುಕಟ್ಟೆ ಉದ್ಘಾಟನೆ

ಉಡುಪಿ, ಜು.6: ಉಡುಪಿ ನಗರಸಭೆಯ ಅನುದಾನದಲ್ಲಿ ನಿರ್ಮಾಣ ಗೊಂಡ ಗೋಪಾಲಪುರ ವಾರ್ಡಿನ ಸಂತೆಕಟ್ಟೆ ಒಣ ಮೀನು ಮಾರುಕಟ್ಟೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಸಂತೆಕಟ್ಟೆಯ ಒಣ ಮೀನು ಮಾರಾಟಗಾರ ಮಹಿಳೆಯರ ಬಹು ವರ್ಷಗಳ ಬೇಡಿಕೆಯಂತೆ ಉಡುಪಿ ನಗರಸಭೆಯ ಮೂಲಕ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರು ಕಟ್ಟೆ ನಿರ್ಮಿಸಲಾಗಿದ್ದು, ವಿದ್ಯುತ್ ದೀಪ ಹಾಗೂ ಫ್ಯಾನ್ ಅಳವಡಿಕೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮೀನು ಮಾರುಕಟ್ಟೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಮಂಜುಳಾ ನಾಯಕ್, ಬಾಲಕೃಷ್ಣ ಶೆಟ್ಟಿ, ಜಯಂತಿ ಪೂಜಾರಿ, ಹಸಿ ಮೀನು ಮಾರಾಟ ಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಶ್ರೀ ನಾಗರಾಜ ಕುಂದರ್, ಸಹಕಾರಿ ಸಂಘದ ನಿರ್ದೇಶಕರಾದ ಸುರೇಶ್ ಕುಂದರ್, ನಾರಾಯಣ, ಮುಖಂಡರಾದ ಪ್ರಶಾಂತ್ ಕಾಂಚನ್ ಬೆಂಗ್ರೆ, ಉಮೇಶ್ ಶೆಟ್ಟಿ, ಸತೀಶ್ ನಾಯ್ಕ್, ಚಿನ್ಮಯ ಮೂರ್ತಿ, ಪ್ರಸಾದ್ ರಾವ್, ಅಜಿತ್ ಕೊಡವೂರು, ಕೃಷ್ಣ ಶೆಟ್ಟಿ, ರುಡಾಲ್ಫ್ ಹಾಗೂ ಒಣ ಮೀನು ಮಾರಾಟಗಾರ ಮಹಿಳೆಯರು ಉಪಸ್ಥಿತರಿದ್ದರು.