ಜು.11: ಯಕ್ಷ ಶಿಕ್ಷಣ ಅಭಿಯಾನಕ್ಕೆ ಚಾಲನೆ
ಉಡುಪಿ, ಜು.10: ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ‘ಯಕ್ಷ ಶಿಕ್ಷಣ’ಕ್ಕೆ ನಾಳೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಾಲನೆ ದೊರೆಯಲಿದೆ.
ಶಾಲಾ ಮಕ್ಕಳಿಗೆ ನೀಡಲಾಗುವ ಯಕ್ಷಗಾನ ತರಬೇತಿಯ ಉದ್ಘಾಟನೆ ಜು.11ರ ಅಪರಾಹ್ನ 2:30ಕ್ಕೆ ಜರುಗಲಿದೆ. ಈ ಬಾರಿ ಉಡುಪಿ ಅಲ್ಲದೆ ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 90 ಪ್ರೌಢಶಾಲೆ ಗಳಲ್ಲಿ ಯಕ್ಷಶಿಕ್ಷಣ ಆರಂಭಗೊಳ್ಳಲಿದ್ದು ಇದರ ಉದ್ಘಾಟನೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ನೆರವೇರಿಸಲಿದ್ದಾರೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆ.ರಘುಪತಿ ಭಟ್ ಮತ್ತು ಡಾ.ನಿ.ಬೀ. ವಿಜಯಬಲ್ಲಾಳರು ಶುಭಾಶಂಸನೆ ಗೈಯಲಿರುವರು. ಅತಿಥಿಗಳಾಗಿ ಶಾಸಕ ರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಗಣಪತಿ ಕೆ, ಡಾ. ಯಲ್ಲಮ್ಮ, ಶಬನಾ ಅಂಜುಮ್, ಶೋಭಾ ಶೆಟ್ಟಿ, ನಾಗೇಶ ನಾಯಕ್ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಭಾಗವಹಿಸಲಿರುವರು .
ಈ ಬಾರಿ ಯಕ್ಷಗಾನ ತರಬೇತಿಗೆ ಆಯ್ಕೆಯಾಗಿರುವ 90 ಶಾಲೆಗಳ ಮುಖ್ಯಶಿಕ್ಷಕರು ಮತ್ತು 40 ಮಂದಿ ಯಕ್ಷ ಗುರುಗಳು ಸಹ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.