ಜೂ.13-14: ಎಂಜಿಎಂ ಕಾಲೇಜಿನಲ್ಲಿ ಅಂ.ರಾ.ವಿಚಾರ ಸಂಕಿರಣ
ಉಡುಪಿ, ಜೂ.10: ಸ್ಥಾಪನೆಯ ಅಮೃತಮಹೋತ್ಸವದ ಸಂಭ್ರಮದ ಅಂಗವಾಗಿ ಎಂಜಿಎಂ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗವು ಇದೇ ಜೂನ್ 13 ಮತ್ತು 14ರಂದು ‘ಸುಸ್ಥಿರ ಜಾಗತಿಕ ವ್ಯಾಪಾರ ಅಭಿವೃದ್ಧಿ: ತಡೆಗಳ ನಿವಾರಣೆ ಹಾಗೂ ಬದಲಾವಣೆಯ ಸಬಲೀಕರಣ’ ಎಂಬ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು 75 ವರ್ಷಗಳ ಶೈಕ್ಷಣಿಕ ಪ್ರಯಾಣದ ನೆನಪಿನಲ್ಲಿ ಆಯೋಜಿಸು ಈ ವಿಚಾರಸಂಕಿರಣವನ್ನು ಜೂ.13ರ ಬೆಳಗ್ಗೆ 9:30ಕ್ಕೆ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ ಅಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಎಂಜಿಎಂ ಕಾಲೇಜು ಟ್ರಸ್ಟ್ನ ಅಧ್ಯಕ್ಷ ಟಿ.ಸತೀಶ್ ಯು.ಪೈ ಅವರು ಮುಖ್ಯ ಅತಿಥಿಯಾಗಿರುವರು ಎಂದರು.
ಮಂಗಳೂರು ವಿವಿಯ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್ ಪ್ರೊ.ಡಾ.ಈಶ್ವರ್ ಹಾಗೂ ಅಕಾಡೆಮಿಯ ಕಾರ್ಯದರ್ಶಿ ಬಿ.ಪಿ.ವರದರಾಜ ಪೈ ಅತಿಥಿಗಳಾಗಿರುವರು. ಪ್ರಾಂಶುಪಾಲ ಪ್ರೊ.ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಚಾರ ಸಂಕಿರಣದ ಸಂಚಾಲಕಿ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಮಲ್ಲಿಕಾ ಶೆಟ್ಟಿ ವಿವರಿಸಿದರು.
ಮಲೇಷ್ಯಾದ ಡಾ.ಶರಣ್ಕುಮಾರ್ ಶೆಟ್ಟಿ ಮುಖ್ಯ ಭಾಷಣಕಾರ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿರುವರು. ಮುಂಬೈ ವಿವಿಯ ಡಾ.ಸಿ.ಎಂ.ಎ.ಕಿನ್ನರಿ ಠಕ್ಕರ್ ಹಾಗೂ ಕೊಯಮತ್ತೂರಿನ ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ಜೆ.ಕ್ಲಮೆಂಟ್ ಅವರು ವಿಷಯ ಮಂಡಿಸಲಿದ್ದಾರೆ ಎಂದರು.
ಜೂ.14ರಂದು ನಿರ್ವಹಣೆ ಮತು ವಾಣಿಜಯ ಕ್ಷೇತ್ರಗಳಲ್ಲಿ ಬದಲಾಗು ತ್ತಿರುವ ಮಾದರಿಗಳು ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಅಪರಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಹೆಯ ಕಾಮರ್ಸ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ಶೆಣೈ ಮುಖ್ಯ ಅತಿಥಿಯಾಗಿರುವರು ಎಂದು ಡಾ.ಮಲ್ಲಿಕಾ ಶೆಟ್ಟಿ ತಿಳಿಸಿದರು.
ವಿವಿಧ ರಾಜ್ಯಗಳ ಹಾಗೂ ವಿದೇಶಗಳ ವಿಷಯ ತಜ್ಞರು ಆನ್ಲೈನ್ ಮೂಲಕ ವಿಷಯ ಮಂಡಿಸಲಿದ್ದು, ಚರ್ಚೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ವನಿತಾ, ಉಪನ್ಯಾಸಕ ಪ್ರೊ.ವಿಕಾಸ್, ಪತ್ರಿಕೋದ್ಯಮ ವಿಭಾಗದ ಪ್ರೊ.ಮನೋಷ್ ಉಪಸ್ಥಿತರಿದ್ದರು.