ಮಾ.17ರಿಂದ ಪೆರ್ಣಂಕಿಲ ದೇವಸ್ಥಾನ ಬ್ರಹ್ಮಕಲಶೋತ್ಸವ
![ಮಾ.17ರಿಂದ ಪೆರ್ಣಂಕಿಲ ದೇವಸ್ಥಾನ ಬ್ರಹ್ಮಕಲಶೋತ್ಸವ ಮಾ.17ರಿಂದ ಪೆರ್ಣಂಕಿಲ ದೇವಸ್ಥಾನ ಬ್ರಹ್ಮಕಲಶೋತ್ಸವ](https://www.varthabharati.in/h-upload/2024/02/13/1243508-ud-f13-pernakila.webp)
ಉಡುಪಿ: ಹಿರಿಯಡ್ಕ ಸಮೀಪದ ಪೆರ್ಣಂಕಿಲ ಗ್ರಾಮದಲ್ಲಿ, ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ, ಸುಮಾರು 1500 ವರ್ಷಗಳ ಐತಿಹ್ಯವಿರುವ ಶ್ರೀಮಹಾಲಿಂಗೇಶ್ವರ - ಶ್ರೀಮಹಾಗಣಪತಿ ದೇವಸ್ಥಾನವು ಸಂಪೂರ್ಣ ಜೀರ್ಣೋದ್ಧಾರ ಗೊಳ್ಳುತ್ತಿದ್ದು, ಮಾ.17ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭವಾಗಿ ಎ.2ರಂದು ಜಾತ್ರೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಶಾ ನಾಯಕ್ ಪೆರ್ಣಂಕಿಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪೇಜಾವರ ಮಠದ ದಿ.ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಆಶಯದಂತೆ, ಅವರ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರು ಈ ಕ್ಷೇತ್ರದ ಜೀರ್ಣೋದ್ಧಾರದ ಸಂಕಲ್ಪ ಮಾಡಿದ್ದಾರೆ. ಭಕ್ತರ ಸಹಕಾರದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ದೇವಳಗಳ ಜೀರ್ಣೋದ್ಧಾರ, 5 ಕೋಟಿ ರೂ. ವೆಚ್ಚದಲ್ಲಿ ಪೇಜಾವರ ಶಾಖಾ ಮಠದ ಪುನರ್ನಿರ್ಮಾಣ ಮತ್ತು 5 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ಮತ್ತು ಭೋಜನಾಲಯ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು ಕೊನೆಯ ಹಂತದಲ್ಲಿವೆ ಎಂದು ಅವರು ತಿಳಿಸಿದರು.
ಮುಂದೆ ಶ್ರೀಗಳು ಇಲ್ಲಿ ಗುರುಕುಲ ಮತ್ತು ಗೋಶಾಲೆಗಳ ನಿರ್ಮಾಣದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ತೀರಾ ಗ್ರಾಮೀಣ ಭಾಗದಲ್ಲಿ ಇಷ್ಟೆಲ್ಲಾ ಯೋಜನೆಗಳಿಗೆ ದಾನಿಗಳನ್ನು ಹುಡುಕಿಕೊಂಡು ಹೋಗದೇ ಅವರೇ ಕ್ಷೇತ್ರಕ್ಕೆ ಬಂದು ದೇಣಿಗೆ ಅರ್ಪಿಸುತ್ತಿರುವುದು ಕ್ಷೇತ್ರದ ಶಕ್ತಿಯನ್ನು ಸೂಚಿಸುತ್ತಿದೆ ಎಂದವರು ಸಂತಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾಣ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ತಂತ್ರಿಗಳಾದ ಮಧುಸೂಧನ ತಂತ್ರಿ ಹಾಗೂ ವಾಸ್ತುಶಾಸ್ತ್ರಜ್ಞರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪಸ್ಥಿತರಿದ್ದರು.
ಪೆರ್ಣನ ಅಂಕಿಲ(ನೇಗಿಲತುದಿ)ದಿಂದ ಉದ್ಭವವಾದ ಗಣಪತಿ
ಹಚ್ಚಹಸಿರಿನ ಪ್ರಕೃತಿ ಮಧ್ಯೆ ಇರುವ ಕ್ಷೇತ್ರದ ಶಿವವನ್ನು ಪುರಾಣಕಾಲದಲ್ಲಿ ಖರಾಸುರನು ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ನಂತರ ಇಲ್ಲಿಯೇ ಸಮೀಪದಲ್ಲಿ ಪೆರ್ಣ ಎಂಬ ರೈತ ಗದ್ದೆ ಉಳುತಿದ್ದಾಗ ಆತನ ಅಂಕಿಲ (ನೇಗಿಲಮೊನೆ)ಕ್ಕೆ ಸಿಕ್ಕಿ ಗಣಪತಿ ವಿಗ್ರಹ ಉದ್ಭವವಾಯಿತು ಎಂದು ಐತಿಹ್ಯವಿದೆ.
ಇಲ್ಲಿನ ಶಿಲಾಶಾಸನದಲ್ಲಿ ಬಾರ್ಕೂರಿನ ಅಳುಪರ ರಾಣಿ ಬಲ್ಲಮಹಾದೇವಿ ಈ ಶಿಲಾಮಯ ಗುಡಿಗಳ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾಖಲೆಗಳಿವೆ. ಕಾಲಕ್ರಮೇಣ ಕ್ಷೇತ್ರದ ಆಡಳಿತ ಪೇಜಾವರ ಮಠಕ್ಕೊಳ ಪಟ್ಟಿತ್ತು. 1989ರಲ್ಲೊಮ್ಮೆ ಬ್ರಹ್ಮಕಲಶೋತ್ಸವ ನಡೆದಿದ್ದು, ಈಗ ಸಂಪೂರ್ಣ ಜೀರ್ಣೋದ್ಧಾರದೊಂದಿಗೆ ಮತ್ತೇ ಬ್ರಹ್ಮಕಲಶೋತ್ಸ ವಕ್ಕೆ ಸಿದ್ದತೆಗಳಾಗುತ್ತಿವೆ.