ಜ.19 ರಂದು ಸೈಕ್ಲಿಂಗ್ ಸ್ಪರ್ಧೆ: ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ
ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟದ ಅಂಗವಾಗಿ ಜನವರಿ 19 ರಂದು ಸೈಕ್ಲಿಂಗ್ ಸ್ಪರ್ಧೆಯು ಬ್ರಹ್ಮಾವರ ತಾಲೂಕಿನ ಕೊಳಲಗಿರಿ ವಾಟರ್ ಟ್ಯಾಂಕ್ನಿಂದ ಪೆರ್ಡೂರು ಮಾರ್ಗದಲ್ಲಿ ಬರುವ ಕುಕ್ಕೆಹಳ್ಳಿ ಜಂಕ್ಷನ್ ಸಮೀಪದ ಶಾಂತಿವನ ಜಂಕ್ಷನ್ವರೆಗೆ 10 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ರಾಜ್ಯ ಮಟ್ಟದ ಸೈಕಲ್ ಸ್ಪರ್ಧೆ ನಡೆಯುವ ಮಾರ್ಗ ದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ದಂಡಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಪೆರ್ಡೂರು- ಹಾವಂಜೆ-ಕೊಳಲಗಿರಿ- ಅಮ್ಮುಂಜೆ- ಉಪ್ಪೂರು ಮಾರ್ಗ ವಾಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಹಿರಿಯಡ್ಕ-ಮಣಿಪಾಲ ಮಾರ್ಗವಾಗಿ ಉಡುಪಿಗೆ ತೆರಳಬೇಕು.
ಪೇತ್ರಿಯಿಂದ ಪೆರ್ಡೂರು ಕಡೆಗೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಕರ್ಜೆ-ಅಲಂಗಾರು ಮಾರ್ಗವಾಗಿ ಪೆರ್ಡೂರು ಕಡೆಗೆ ತೆರಳಬೇಕು. ಪೇತ್ರಿಯಿಂದ ಕುಕ್ಕೆಹಳ್ಳಿಗೆ ಹೋಗುವ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ 66ರಿಂದ ಉಪ್ಪೂರು-ಉಗ್ಗೆಲಬೆಟ್ಟು-ನಂದಿನಿ ಕೆಎಂಎಫ್- ಕೊಳಲಗಿರಿ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣ ವಾಗಿ ನಿರ್ಬಂಧಿಸಲಾಗುವುದು. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 66ರಿಂದ ಕೆ.ಜಿ.ರಸ್ತೆ-ಅಮ್ಮುಂಜೆ-ಕೊಳಲಗಿರಿ-ಹಾವಂಜೆ-ಕುಕ್ಕೆಹಳ್ಳಿ ಮಾರ್ಗದ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದೆ.







