ಜೂ.19ಕ್ಕೆ ಉಡುಪಿ ಜಿಲ್ಲೆಯ 774 ನವಉದ್ಯೋಗಿಗಳಿಗೆ ಪಿಎಂ-ವಿಬಿಆರ್ವೈ ಪ್ರೋತ್ಸಾಹಧನ

ಉಡುಪಿ, ಜೂ.17: ದೇಶದಲ್ಲಿ ಉದ್ಯೋಗಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೂ.19ರಿಂದ ಕೇಂದ್ರ ಸರಕಾರ ಪ್ರಾರಂಭಿಸಲಿರುವ ರಾಷ್ಟ್ರೀಯ ಮಟ್ಟದ ನೂತನ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (ಪಿಎಂ-ವಿಬಿಆರ್ವೈ) ಅಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 774 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ದೊಂದಿಗೆ ಯೋಜನೆಯ ಪ್ರೋತ್ಸಾಹಧನವನ್ನು ವಿತರಿಸಲಾಗುವುದು ಎಂದು ಪ್ರಾದೇಶಿಕ ಕಾರ್ಮಿಕ ಭವಿಷ್ಯ ನಿಧಿ ಆಯುಕ್ತರಾದ ಶಶಿಕಾಂತ್ ದಹಿಯಾ ತಿಳಿಸಿದ್ದಾರೆ.
ದೇಶದಲ್ಲಿ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ಗೊಳಿಸಲಿರುವ ಪಿಎಂ ವಿಬಿಆರ್ವೈ ಯೋಜನೆಯ ವಿವರಗಳನ್ನು ವಿವರಿಸಲು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರದ ಈ ಯೋಜನೆಯಂತೆ ಹೊಸದಾಗಿ ಉದ್ಯೋಗ ಪಡೆಯುವ ಉದ್ಯೋಗಿಗೆ ಹಾಗೂ ಉದ್ಯೋಗ ದಾತರಿಗೆ ಸರಕಾರದ ವತಿಯಿಂದ ಪ್ರೋತ್ಸಾಹಧನ ಸಿಗಲಿದೆ. ಸುಮಾರು ಒಂದು ಲಕ್ಷ ಕೋಟಿ ರೂ.ಮೊತ್ತದ ಬಜೆಟ್ ನೊಂದಿಗೆ ಜಾರಿಗೊಳ್ಳುವ ಈ ಯೋಜನೆಯಿಂದ ದೇಶಾದ್ಯಂತ ಮೂರೂವರೆ ಕೋಟಿ ಅಧಿಕ ಉದ್ಯೋಗಾವ ಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಈ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಜೂ.19ರಂದು ಸಂಜೆ 4:30ಕ್ಕೆ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಶಶಿಕಾಂತ್ ದಹಿಯಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂದು ಸಂಜೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸುವ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ, ಫಲಾನುಭವಿಗಳು ಹಾಗೂ ಉದ್ಯೋಗದಾತ ರೊಂದಿಗೆ ಸಂವಾದ ಮತ್ತು ವಿವಿಧ ಸಂಸ್ಥೆಗಳ ಮೂಲಕ ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವ್ಯಾಪ್ತಿಗೆ ಸೇರಿದ ಕಂಪೆನಿಗಳಲ್ಲಿ ಹೊಸದಾಗಿ ಉದ್ಯೋಗ ಪಡೆ ಯುವ ಉಡುಪಿ ಜಿಲ್ಲೆಯ 774 ಮಂದಿ ಉದ್ಯೋಗಿಗಳಿಗೆ ಅಂದು ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಲಾ ಗುತ್ತದೆ. ಜಿಲ್ಲೆಯಲ್ಲಿ 222 ಕಂಪೆನಿಗಳು ಈ ಉದ್ಯೋಗವನ್ನು ನೀಡುತ್ತಿವೆ ಎಂದೂ ದಹಿಯಾ ವಿವರಿಸಿದರು.
ಯೋಜನೆಯ ಮೊದಲ ಭಾಗದಲ್ಲಿ ಇಪಿಎಫ್ಒ ವ್ಯಾಪ್ತಿಯ ಸಂಸ್ಥೆಗಳಿಗೆ ಮೊದಲ ಬಾರಿಗೆ ಸೇರುವ ಹಾಗೂ ತಿಂಗಳಿಗೆ ಒಂದು ಲಕ್ಷದವರೆಗೆ ವೇತನ ಪಡೆಯುವ ನೌಕರರು, ನಿಗದಿತ ಷರತ್ತುಗಳನ್ನು ಪೂರೈಸಿದಲ್ಲಿ ಒಂದು ತಿಂಗಳ ವೇತನಕ್ಕೆ ಸಮಾನವಾದ ಹಣಕಾಸು ನೆರವು ಪಡೆಯಲಿದ್ದು, ಗರಿಷ್ಠ 15,000 ರೂ.ವರೆಗೆ ಸಹಾಯಧನ ದೊರೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಯೋಜನೆಯ ಭಾಗ-ಎ ಅಡಿಯಲ್ಲಿ 774 ಫಲಾನುಭವಿಗಳನ್ನು ಗುರುತಿಸಲಾಗಿದ್ದು,ಅವರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇವರು ಉದ್ಯೋಗಕ್ಕೆ ಸೇರಿದ ಒಂದು ವರ್ಷದೊಳಗೆ ಎರಡು ಕಂತುಗಳಲ್ಲಿ ಒಟ್ಟು 15,000ರೂ. ಸಹಾಯಧನವನ್ನು ಪಡೆಯಲಿದ್ದಾರೆ. ಮೊದಲ ಆರು ತಿಂಗಳಲ್ಲಿ 7,500ರೂ. ಹಾಗೂ ಒಂದು ವರ್ಷದೊಳಗೆ ಇನ್ನೊಂದು 7,5000ರೂ. ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾಗೊಳ್ಳಲಿದೆ ಎಂದರು.
ಅದೇ ರೀತಿ ಉದ್ಯೋಗದಾತರಿಗೆ ಎರಡರಿಂದ ನಾಲ್ಕು ವರ್ಷಗಳ ವರೆಗೆ ಇದರ ಲಾಭ ದೊರಕಲಿದೆ. ಉದ್ಯೋಗ ದಾತರು ನೀಡುವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದನ್ನು ಸರಕಾರ ನೀಡುತ್ತಿದೆ. ಕೇವಲ ಹೊಸ ದಾಗಿ ನೇಮಕಗೊಳ್ಳುವ ಉದ್ಯೋಗಿಗಳಿಗೆ ಮಾತ್ರ ಇದು ಅನ್ವಯಗೊಳ್ಳಲಿದೆ ಎಂದು ಶಶಿಕಾಂತ ದಹಿಯಾ ತಿಳಿಸಿದರು.
ಮಣಿಪಾಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತರಿರುವರು. ಜಿಲ್ಲೆಯ ವಿವಿಧ ಉದ್ಯಮ ಪ್ರತಿನಿಧಿಗಳು, ಉದ್ಯೋಗದಾತರು, ನೌಕರರು, ಫಲಾನುಭವಿಗಳು ಹಾಗೂ ಇತರ ಪಾಲುದಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಉಡುಪಿ ಪ್ರಾದೇಶಿಕ ಇಪಿಎಫ್ಒ ಕಚೇರಿಯ ಅಕೌಂಟ್ ಅಧಿಕಾರಿಗಳಾದ ರಾಜೀವ್ಕುಮಾರ್ ಝಾ ಹಾಗೂ ನರೇಂದ್ರ ಬಾಬು ಗುಟ್ಟಿ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.






