ಎ.20-23: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಂದ ಉಡುಪಿ ಜಿಲ್ಲಾ ಪ್ರವಾಸ
ಉಡುಪಿ, ಎ.17: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಅವರು ಎಪ್ರಿಲ್ 20ರಿಂದ 23ರವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಎ.20ರಂದು ಸಂಜೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿರುವ ಅಧ್ಯಕ್ಷರು, 21ರಂದು ಬೆಳಗ್ಗೆ 11 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿರುವರು.ಅಪರಾಹ್ನ 3:30ಕ್ಕೆ ಅಲ್ಪಸಂಖ್ಯಾತ ಸಂಘ, ಸಂಸ್ಥೆ, ಶಾಲೆ ಹಾಗೂ ವಸತಿ ನಿಲಯ ಗಳಿಗೆ ಭೇಟಿ ನೀಡಿ, ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಎ.22ರಂದು ಬೆಳಗ್ಗೆ 10 ಗಂಟೆಗೆ ಅಂಬಾಗಿಲು ಅಮೃತ್ ಗಾರ್ಡನ್ನಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಆಯೋಜಿಸಲಾಗುವ ಗಣ್ಯರ ಸಮಾವೇಶ ಹಾಗೂ ಒಕ್ಕೂಟದ 25ನೇ ವರ್ಷದ ವಿಶೇಷ ವಾರ್ತಾ ಸಂಚಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 4:30ಕ್ಕೆ ಮಲ್ಪೆಯ ಸೈಯದನಾ ಅಬೂಬಕರ್ ಸಿದ್ದಿಕ್ ಜಾಮಿಯಾ ಮಸ್ಜಿದ್ ಇಲ್ಲಿ ನಮ್ಮ ನಾಡು ಒಕ್ಕೂಟ ಮತ್ತು ಜಾಮಿಯಾ ಮಸೀದಿಯವರು ಆಯೋಜಿಸಿರುವ ವೃತ್ತಿ ಮಾರ್ಗದರ್ಶನ (ಕೆರಿಯರ್ ಗೈಡೆನ್ಸ್) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎ.23ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.







