ಫೆ.23ರಿಂದ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-13’

ಉಡುಪಿ, ಫೆ.21: 23 ವರ್ಷಗಳ ಹಿಂದೆ ಪ್ರಾರಂಭಗೊಂಡು ನಾಟಕ, ಯಕ್ಷಗಾನ, ಸಾಹಿತ್ಯ, ಜನಪರ ಶೈಕ್ಷಣಿಕ ಕ್ಷೇತ್ರ ಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಸುಮನಸಾ ಕೊಡವೂರು ತಂಡದ ಈ ವರ್ಷದ ನಾಟಕೋತ್ಸವ ‘ರಂಗಹಬ್ಬ-13’ ಫೆ.23ರಿಂದ ಮಾ.1ರವರೆಗೆ ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ಮಾಹಿತಿಗಳನ್ನು ನೀಡಿ ಮಾತನಾಡಿದ ಅವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ ಹಾಗೂ ಹೊಸದಿಲ್ಲಿಯ ಸಂಸ್ಕೃತಿ ನಿರ್ದೇಶನಾಲಯಗಳ ಸಹಯೋಗದೊಂದಿಗೆ ಈ ಬಾರಿಯ ರಂಗಹಬ್ಬ-13ನ್ನು ಆಯೋಜಿಸಲಾಗುತ್ತಿದೆ ಎಂದರು.
ರಂಗಹಬ್ಬದ ಉದ್ಘಾಟನೆ ಫೆ.23ರ ರವಿವಾರ ಸಂಜೆ 6:30ಕ್ಕೆ ನಡೆಯಲಿದ್ದು, ಕನ್ನಡದ ಸೃಜನಶೀಲ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅವರು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶಪಾಲ್ ಎ.ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿಗಳಾದ ಎಸ್.ಕೆ.ಸಾಲ್ಯಾನ್, ಆನಂದ್ ಪಿ.ಸುವರ್ಣ, ದಿವಾಕರ್ ಶೆಟ್ಟಿ ತೋಟದಮನೆ, ಮಿಥುನ್ ಕುಂದರ್, ದಿವಾಕರ್ ಸುನಿಲ್ ಹಾಗೂ ಕೃಷ್ಣಮೂರ್ತಿ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿದಿನ ಸಭಾಕಾರ್ಯಕ್ರಮ ಸಂಜೆ 6:30ಕ್ಕೆ ಪ್ರಾರಂಭಗೊಳ್ಳಲಿದ್ದು, ಬಳಿಕ ಅಪರೂಪದ ನಾಟಕಗಳ ಪ್ರದರ್ಶನವಿರು ತ್ತದೆ. ಅಲ್ಲದೇ ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟದ ಪ್ರೇಕ್ಷಕರಿಗೆ ಉಡುಗೊರೆ ಇತ್ಯಾದಿಗಳಿರುತ್ತವೆ. ಪ್ರತಿದಿನದ ಸಾಧಕರಿಗೆ ಸನ್ಮಾನದಲ್ಲಿ ರಂಗಸಾಧಕರಾದ ಗೀತಂ ಗಿರೀಶ್, ಎಂ.ಕೆ.ವಾಸುದೇವ, ರಾಜು ಕಡೆಕಾರ್, ಉಪ್ಪೂರು ಭಾಗ್ಯ ಲಕ್ಷ್ಮೀ, ದಿನೇಶ್ ಆಚಾರ್ಯ ಸುಬ್ರಮಣ್ಯ ನಗರ, ಅಜಿತ್ ಅಂಬಲಪಾಡಿ ಇವರನ್ನು ಸನ್ಮಾನಿಸಲಾಗುವುದು ಎಂದರು.
ಫೆ.23ರಂದು ಬೆಂಗಳೂರಿನ ಎಂಟು, ತಮಿಳುನಾಡಿ ನಾಲ್ವರು ತೃತೀಯ ಲಿಂಗಿ ಕಲಾವಿದರೇ ಅಭಿನಯಿಸುವ ಬೆಂಗಳೂರಿನ ಪಯಣ ತಂಡದ ‘ತಲ್ಕಿ’ ಕನ್ನಡ ನಾಟಕದ ಪ್ರದರ್ಶನವಿದೆ. ನಾಟಕದ ರಚನೆ ಮತ್ತು ನಿರ್ದೇಶನ ಶ್ರೀಜಿತ್ ಸುಂದರಂ.
ಫೆ.24ರಂದು ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಕನ್ನಡ ನಾಟಕ ‘ಗೊಂದಿ’, 25ರಂದು ಹಾಸನದ ಅನಿಕೇತನ ತಂಡದಿಂದ ಪೂರ್ಣಚಂದ್ರ ತೇಜ್ವಿ ಅವರ ಕತೆಯನ್ನಾಧರಿಸಿದ ‘ಕಿರಗೂರಿನ ಗಯ್ಯಾಳಿಗಳು’ ನಾಟಕ ದಿ.ಕೆ.ಸಣ್ಣೇಗೌಡರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಫೆ.26ರಂದು ಸುಮನಸಾ ಕೊಡವೂರು ತಂಡದಿಂದ ತುಳು ನಾಟಕ ‘ಈದಿ’ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ, 27ರಂದು ಧಾರವಾಡದ ಆಟ-ಮಾಟ ತಂಡದಿಂದ ಮಹಾದೇವ ಹಡಪದ ನಿರ್ದೇಶನದಲ್ಲಿ ಕನ್ನಡ ನಾಟಕ ‘ಗುಡಿಯ ನೋಡಿರಣ್ಣ’ ಪ್ರದರ್ಶನಗೊಂಡರೆ, 28ರಂದು ಸುಮನಸಾ ಕೊಡವೂರು ಮಹಿಳಾ ತಂಡದಿಂದ ಯಕ್ಷನಾಟಕ ‘ವಿದ್ಯುನ್ಮತಿ ಕಲ್ಯಾಣ’ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಮಾ.1ರಂದು ಸಮಾರೋಪ ಸಮಾರಂಭ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರಮೋದ್ ಮಧ್ವರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಸ್ವಪ್ನ ಸುರೇಶ್, ಡಾ.ಆಕಾಶ್ರಾಜ್ ಜೈನ್, ಮಹಮ್ಮದ್ ಮೌಲಾ, ಪ್ರವೀಣ್ ಕುಮಾರ್ ಶೆಟ್ಟಿ, ದೇವದಾಸ್ ಸುವರ್ಣ ಮುಂತಾದವರು ಉಪಸ್ಥಿತರಿರುವರು.
ಅಂದು ಬ್ರಹ್ಮಾವರದ ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ಯಕ್ಷಗುರು ಯು.ದುಗ್ಗಪ್ಪ ನೆನಪಿನಲ್ಲಿ ‘ಯಕ್ಷಗುರು’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದು ಉಡುಪಿಯ ಪುನಹ ಥಿಯೇಟರ್ ತಂಡ ಮಹೇಶ್ ದತ್ತಾನಿ ನಿರ್ದೇಶನದಲ್ಲಿ ‘ಯೋಗಿ ಮತ್ತು ಭೋಗಿ’ ಕನ್ನಡ ನಾಟಕ ಪ್ರದರ್ಶಿಸಲಿದೆ ಎಂದು ಪ್ರಕಾಶ್ ಕೊಡವೂರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಉಪಾಧ್ಯಕ್ಷರಾದ ವಿನಯಕುಮಾರ್, ಯೊಗೀಶ್ ಕೊಳಲಗಿರಿ, ಸಂಚಾಲಕ ಭಾಸ್ಕರ ಪಾಲನ್ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಹಾಗೂ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.







