ಶೀಘ್ರವೇ ಉಡುಪಿ ಜಿಲ್ಲೆಯ 50 ಕಡೆ ದೃಷ್ಟಿ ಯೋಜನೆ ಜಾರಿ: ಎಸ್ಪಿ ಹರಿರಾಮ್ ಶಂಕರ್

ಕುಂದಾಪುರ, ಆ.19: ಮನೆ ಮನೆಗೆ ಪೊಲೀಸ್ ಯೋಜನೆ ಸ್ವರೂಪ ದಲ್ಲಿಯೇ ‘ದೃಷ್ಟಿ ಯೋಜನೆ’ಯನ್ನು ಪ್ರಾರಂಭಿ ಸಲಾಗಿದ್ದು, ಪೊಲೀಸ್ ಇಲಾಖೆಯ ಮೇಲುಸ್ತುವಾರಿಯಲ್ಲಿ, ಖಾಸಗಿ ಭದ್ರತಾ ವ್ಯವಸ್ಥೆಯಡಿ ಅಪರಾಧ ಚಟುವಟಿಕೆ ಗಳ ಕಣ್ಗಾವಲು ಮಾಡುವ ವಿನೂತನ ವ್ಯವಸ್ಥೆ ಇದಾಗಿದೆ ಶೀಘ್ರದಲ್ಲೇ ಜಿಲ್ಲೆಯ 50 ಕಡೆಗಳಲ್ಲಿ ದೃಷ್ಟಿ ಯೋಜನೆ ಜಾರಿ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.
ಕುಂದಾಪುರ ಕೋಡಿಯ ಬ್ಯಾರಿಸ್ ಕಾಲೇಜಿನಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಆಶ್ರಯದಲ್ಲಿ ಸೋಮವಾರ ಸಂಜೆ ‘ದೃಷ್ಟಿ ಯೋಜನೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನೆ, ಅಂಗಡಿ ಹಾಗೂ ಸಾರ್ವಜನಿಕ ರಕ್ಷಣೆಗೆ ನೆರವಾಗಲು ದೃಷ್ಟಿ ಯೋಜನೆ ಆರಂಭಿಸಿದ್ದು, ಖಾಸಗಿ ಭದ್ರತಾ ವ್ಯವಸ್ಥೆಗಾಗಿ ಮಾಸಿಕ 100-150 ರೂ. ದೇಣಿಗೆಯಡಿಯಲ್ಲಿ ಸುರಕ್ಷತೆ ಖಾತ್ರಿಪಡಿಸಿಕೊಳ್ಳಬಹುದು. ಪ್ರತಿ 2 ಗಂಟೆಗಳಿಗೊಮ್ಮೆ, ಠಾಣೆಯಿಂದ ದೂರವಾಣಿ ಕರೆ ಮಾಡಿ, ಚಲನವಲನಗಳ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಅನುಮಾನಾಸ್ಪದ ಚಟುವಟಿಕೆಗಳು ಇಲಾಖೆಯ ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲು ಇದು ಸಹಕಾರಿ ಯಾಗಿದೆ ಎಂದರು.
ಜಿಲ್ಲಾ ಗೃಹರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ. ಮಾತನಾಡಿ, ಶೂನ್ಯ ಅಪರಾಧ ಜಿಲ್ಲೆಯಾಗಲು ಎಲ್ಲರ ಪ್ರಯತ್ನ ಅಗತ್ಯ. ದೃಷ್ಟಿ ಯೋಜನೆ ಹಾಗೂ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಯ ಒಳಿತನ್ನು ಗುರುತಿಸಿ ಬೆಂಬಲಿಸಬೇಕು ಎಂದು ತಿಳಿಸಿದರು.
ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ 13 ಕಡೆ ಈಗಾಗಲೇ ದೃಷ್ಟಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಅಪರಾಧ, ಅಪಘಾತ ಹಾಗೂ ಶಾಲಾ ಕಾಲೇಜು ಮಕ್ಕಳ ಡ್ರಗ್ಸ್ ಹಾವಳಿ ತಡೆಗೂ ಈ ಯೋಜನೆ ಉಪಯೋಗವಾಗಲಿದೆ ಎಂದು ಹೇಳಿದರು.
ಯಂಗ್ ಮುಸ್ಲಿಂ ಅಸೋಸಿಯೇಶನ್ ಪದಾಧಿಕಾರಿ ಮುನಾಫ್ ಕೋಡಿ ಹಾಗೂ ತಾಲ್ಲೂಕು ಬೋರ್ಡ್ ಮಾಜಿ ಸದಸ್ಯ ಅಬ್ದುಲ್ ಕೋಡಿ ಮಾತನಾಡಿದರು. ಬ್ಯಾರೀಸ್ ಸಮೂಹ ಸಂಸ್ಥೆಯ ಆಡಳಿತ ಟ್ರಸ್ಟಿ ಅಶ್ರಫ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
ಕೋಡಿ ಬ್ಯಾರಿಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹಿಮಾನ್ ಕೋಡಿ, ಪುರಸಭೆ ಸದಸ್ಯರಾದ ಅಶ್ಪಕ್ ಕೋಡಿ, ಕಮಲ ಮಂಜುನಾಥ್, ಲಕ್ಷ್ಮೀ ಬಾಯಿ, ಕೋಡಿ ಶ್ರೀಚಕ್ರಮ್ಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಕೋಡಿ ಮುಹಿಯುದೀನ್ ಜುಮಾ ಮಸೀದಿ ಅಧ್ಯಕ್ಷ ಜುಲ್ಫಿಕರ್, ಬಿಲಾಲ್ ಮಸೀದಿ ಅಧ್ಯಕ್ಷ ಮಹಮದ್ ಅಲಿ, ಹೈಗುಳಿ ದೇವಸ್ಥಾನ ಅಧ್ಯಕ್ಷ ವೆಂಕಟೇಶ ಬಿಲ್ಲವ, ಕಿಲೆರಿಯಾ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್.ಫಾರೂಕ್ ಉಪಸ್ಥಿತರಿದ್ದರು.
ದೃಷ್ಟಿ ಯೋಜನೆಯಲ್ಲಿ ಸೇವೆ ಸಲ್ಲಿಸುವ ಹಸೈನಾರ್ ಕೋಡಿ ಅವರಿಗೆ ಧ್ವಜ ಹಸ್ತಾಂತರ ಮಾಡಲಾಯಿತು. ವೃತ್ತ ನಿರೀಕ್ಷಕ ಸಿ.ಪಿ.ಜಯರಾಮ ಗೌಡ ಸ್ವಾಗತಿಸಿದರು. ಕುಂದಾಪುರ ಠಾಣೆಯ ಎಸ್ಸೈ ನಂಜಾನಾಯ್ಕ್ ವಂದಿಸಿದರು, ಸಿಬ್ಬಂದಿ ಮಧುಸೂದನ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.







