ಮಾ.6ರಂದು ಬೀಡಿ ಕಾರ್ಮಿಕರಿಂದ ವಿಧಾನಸೌಧ ಚಲೋ: ಕವಿರಾಜ್

ಉಡುಪಿ, ಮಾ.2: ಹಲವು ವರ್ಷಗಳಿಂದ ಬಾಕಿ ಇರುವ ತುಟ್ಟಿಭತ್ಯೆ ನೀಡಬೇಕು ಒತ್ತಾಯಿಸಿ ಮಾ.6ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿಯಲ್ಲಿ ಉಡುಪಿ ಮತ್ತು ದ.ಕ.ಜಿಲ್ಲೆಯ ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಖಿಲಭಾರತ ಬೀಡಿ ಫೆಡರೇಷನ್ ಕೇಂದ್ರ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್ ತಿಳಿಸಿದ್ದಾರೆ.
ಬೀಡಿ ಕಂಪನಿಯ ಮಾಲೀಕರು ಹಲವು ವರ್ಷಗಳಿಂದ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಬದ್ಧವಾಗಿ ಸಿಗಬೇಕಾದ ಕನಿಷ್ಠ ಕೂಲಿ, ತುಟ್ಟಿಭತ್ಯೆಯನ್ನು ನೀಡದೆ ವಂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳಪೆ ಬೀಡಿ ಎಲೆಗಳನ್ನು ನೀಡಿ ಕಾರ್ಮಿಕರನ್ನು ಸತಾಯಿಸುದರೋಂದಿಗೆ ವೇತನ ಕಡಿತಗೊಳಿಸುತ್ತಿದ್ದಾರೆ ಅದ್ದರಿಂದ ಕಾರ್ಮಿಕ ಇಲಾಖೆ, ಸರಕಾರದ ಗಮನಕ್ಕೂ ತರಲಾಗಿದೆ.
ಮಾರ್ಚ್ 3ರಂದು ಬಜೆಟ್ ಪೂರ್ವ ಅಧಿವೇಶನ ನಡೆಯುತ್ತಿದ್ದು ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಈಗಾಗಲೇ ಉಡುಪಿ ಜಿಲ್ಲೆಯ ಮತ್ತು ದ.ಕ ಜಿಲ್ಲೆಯ ಶಾಸಕರಿಗೆ,ವಿಧಾನಪರಿಷತ್ ಸದಸ್ಯರಿಗೆ ಬೀಡಿ ಸಂಘದಿಂದ ಮನವಿ ನೀಡಲಾಗಿದೆ.ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ 3ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





