ನ.14ರಿಂದ ಉಡುಪಿ ಜಿಲ್ಲೆಯಾದ್ಯಂತ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮಗಳು

ಉಡುಪಿ, ನ.10: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿ ಯನ್ ಉಡುಪಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 14ರಿಂದ 20ರವರೆಗೆ ಉಡುಪಿ ಜಿಲ್ಲೆಯಾದ್ಯಂತ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಪ್ತಾಹದ ವಿವರಗಳನ್ನು ನೀಡಿದ ಅವರು, ಈ ಬಾರಿಯ ಸಹಕಾರಿ ಸಪ್ತಾಹದ ಧ್ಯೇಯ ವಾಕ್ಯ ‘ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು’ ಆಗಿದ್ದು, ಜಿಲ್ಲಾ ಸಹಕಾರಿ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಇದನ್ನು ಆಚರಿಸಲಾಗುವುದು ಎಂದರು.
ನ.14ರಿಂದ 20ರವರೆಗೆ ಸಹಕಾರ ತತ್ವಗಳು ಮತ್ತು ಸಹಕಾರ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸಲು ಸಹಕಾರ ಪ್ರಚಾರ ರಥವನ್ನು 7 ದಿನಗಳ ಕಾಲ ಸಹಕಾರ ಸಪ್ತಾಹ ನಡೆಯುವ ಸ್ಥಳಗಳಿಗೆ ಕಳುಸಲಾಗುತ್ತಿದೆ. ಭಾರತದಲ್ಲಿ ಸಹಕಾರ ಚಳುವಳಿ ಪ್ರಾರಂಭವಾಗಿ 119 ವರ್ಷಗಳು ಕಳೆದಿದ್ದು, ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿ ಸುತ್ತಾ ಬಂದಿದೆ ಎಂದರು.
ನ.14ರಂದು ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ಬೆಳಗ್ಗೆ 10ಕ್ಕೆ ಲಿಕೋ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಲಿದ್ದು, ಶಾಸಕ ಯಶಪಾಲ್ ಸುವರ್ಣ ಅವರು ಸಪ್ತಾಹವನ್ನು ಉದ್ಘಾಟಿಸುವರು. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸುವರು ಎಂದರು. ಎಲ್ಐಸಿ ಎಂಪ್ಲಾಯ.ಈಸ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ಗಳ ಸಹಯೋಗದೊಂದಿಗೆ ಇದು ನಡೆಯಲಿದೆ.
ನ.15ರ ಕಾರ್ಯಕ್ರಮ ಅಪರಾಹ್ನ 12ಗಂಟೆಗೆ ಕೋಟ ವ್ಯವಸಾಯ ಸಹಕಾರ ಸಂಘದ ವತಿಯಿಂದ ಕೋಟ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ, ನ.16ರ ಕಾರ್ಯಕ್ರಮ ಕಾರ್ಕಳ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ವತಿಯಿಂದ ಕಾರ್ಕಳ ಲ್ಯಾಂಪ್ಸ್ ಸಭಾಂಗಣದಲ್ಲಿ ಅಪರಾಹ್ನ 3:00ಕ್ಕೆ ಹಾಗೂ ನ.17ರ ಕಾರ್ಯಕ್ರಮ ಉಡುಪಿ ತಾಲೂಕು ಇಂಡಸ್ಟ್ರೀ ಯಲ್ ಸಹಕಾರ ಸಂಘದ ಆಶ್ರಯದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರಲ್ಲಿ ರಾಜ್ಯಮಟ್ಟದ ಸಪ್ತಾಹ: ನ.18ರ ಶುಕ್ರವಾರದಂದು ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ಈ ಬಾರಿ ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ ನೆರವೇರಿಸಲಿದ್ದಾರೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ವಿಶೇಷವಾದ ವಸ್ತುಪ್ರದರ್ಶನ ಮಳಿಗೆಗಳನ್ನು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದರೆ, ಉತ್ತಮ ಸಹಕಾರ ಸಂಘಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರಶಸ್ತಿ ವಿತರಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ಕುಮಾರ್ ಕಟೀಲ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅಲ್ಲದೇ ಉಭಯ ಜಿಲ್ಲೆಗಳ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಯಶ್ಪಾಲ್ ಸುವರ್ಣ, ದ.ಕ ಹಾಲು ಒಕ್ಕೂಟದ ಆಧ್ಯಕ್ಷ ಸುಚರಿತ ಶೆಟ್ಟಿ, ಸಹಕಾರ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಹಕಾರ ಸಂಘಗಳ ನಿಬಂಧಕ ಕ್ಯಾ.ಡಾ.ಕೆ. ರಾಜೇಂದ್ರ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮುಂತಾದವರು ಭಾಗವಹಿಸುವರು ಎಂದರು.
ನ.19ರಂದು ಕುಂದಾಪುರ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಆಶ್ರಯದಲ್ಲಿ ಕೋಟೇಶ್ವರದ ಕಮಲಮ್ಮ ಸರ್ವೋ ತ್ತಮ ಬುದ್ಧ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9:30ಕ್ಕೆ ಆರನೇ ದಿನದ ಕಾರ್ಯಕ್ರಮ ನಡೆಯಲಿದೆ. ಸಪ್ತಾಹದ ಸಮಾರೋಪ ಸಮಾರಂಭ ನ.20ರಂದು ಪಡುಬಿದ್ರಿಯ ಸಹಕಾರ ಸಂಗಮದ ವೈ.ಲಕ್ಷಣ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಪಡುಬಿದ್ರೆ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ನಡೆಯಲಿದೆ.
ಸಮಾರಂಭವನ್ನು ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಪಡುಬಿದ್ರೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಂಘದ ನವೀಕೃತ ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ನ ನಿರ್ದೇಶಕರಾದ ಎ.ಹರೀಶ್ ಕಿಣಿ, ಶಂಕರ ಪೂಜಾರಿ ಕಟಪಾಡಿ, ಮನೋಹರ ಕರ್ಕೇರ, ಸಿಇಓ ಹಾಲಪ್ಪ ಕೋಡಿಹಳ್ಳಿ, ವಿಶ್ವನಾಥ್, ಅರುಣ್ಕುಮಾರ್ ಉಪಸ್ಥಿತರಿದ್ದರು.







