ಜಾಗೃತ ಗ್ರಾಹಕರಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯ: ಸುಮೀಲ ಟಿ. ಮಾಸರೆಡ್ಡಿ

ಉಡುಪಿ, ಡಿ.24: ಇಂದಿನ ಆನ್ಲೈನ್ ಯುಗದಲ್ಲಿ ವಿದ್ಯಾರ್ಥಿಗಳೂ ಜಾಗೃತ ಗ್ರಾಹಕರಾಗಬೇಕಿದೆ. ವಿದ್ಯಾರ್ಥಿ ಗಳಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇರುವುದು ಅತ್ಯಗತ್ಯ. ಜಾಗೃತ ಗ್ರಾಹಕರಿಂದ ಮಾತ್ರ ಜಾಗೃತ ಮತ್ತು ನ್ಯಾಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುಮೀಲ ಟಿ. ಮಾಸರೆಡ್ಡಿ ಹೇಳಿದ್ದಾರೆ.
ನಗರದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಬಳಕೆದಾರರ ವೇದಿಕೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು, ದೋಷಪೂರಿತ ವಸ್ತುಗಳು ಮತ್ತು ಕೊರತೆಯಿಂದ ಕೂಡಿದ ಸೇವೆಗಳ ವಿರುದ್ಧ ಪರಿಹಾರ ಒದಗಿಸಲು ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸಲು 1986ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದರ ಪ್ರಯುಕ್ತ ಪ್ರತಿ ವರ್ಷ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಯನ್ನು ಆಚರಿಸುತ್ತೇವೆ ಎಂದವರು ವಿವರಿಸಿದರು.
ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತು ಅಥವಾ ಸೇವೆಗಳು ದೋಷಪೂರಿತವಾಗಿದ್ದ, ಆನ್ಲೈನ್ ಖರೀದಿಯಲ್ಲಿ ನಮಗೆ ಮೋಸ ವಂಚನೆ ನಡೆದಾಗ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ನಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯ ಮತ್ತು ಪರಿಹಾರ ಪಡೆದುಕೊಳ್ಳಬಹುದು. ಗ್ರಾಹಕರ ರಕ್ಷಣೆಗಾಗಿರುವ ಕಾಯ್ದೆಗಳ ಕುರಿತಂತೆ ಮಾಹಿತಿಗಳನ್ನು ಹೊಂದಿದ್ದಾಗ ಸಮಾಜದಲ್ಲಿ ಜಾಗೃತಿ ಮೂಡುತ್ತದೆ ಎಂದರು.
ಗ್ರಾಹಕರನ್ನು ಮರಳು ಮಾಡುವ ಜಾಹೀರಾತುಗಳ ಕುರಿತಂತೆಯೂ ನಮ್ಮಲ್ಲಿ ತಿಳುವಳಿಕೆ ಇರಬೇಕು. ನಮ್ಮ ಹಕ್ಕುಗಳ ಬಗ್ಗೆ ಅರಿದ್ದಾಗ ಅನ್ಯಾಯದ ವ್ಯಾಪಾರ ಪದ್ಧತಿಗಳಿಗೆ ಕಡಿವಾಣ ಹಾಕಬಹುದು ಎಂದು ಸುಮೀಲ ಟಿ. ಮಾಸರೆಡ್ಡಿ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಮಾತನಾಡಿ, ಹಿಂದಿನ ಕಾಲದಲ್ಲಿ ಭೌತಿಕವಾಗಿ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತಿದ್ದೆವು. ಇದೀಗ ಡಿಜಿಟಲ್ ಯುಗದಲ್ಲಿ ಎಲ್ಲವನ್ನೂ ಆನ್ಲೈನ್ ಮೂಲಕ ಪಡೆಯುತ್ತಿದ್ದೇವೆ. ಖರೀದಿಯಲ್ಲಿ ನಡೆಯುವ ಯಾವುದೇ ರೀತಿಯ ಮೋಸಗಳಿಗೆ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆರೋಗ್ಯ, ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಸೇವೆಯಲ್ಲಿ ನಡೆಯುವ ಅನ್ಯಾಯಗಳಿಗೂ ಗ್ರಾಹಕರ ನ್ಯಾಯಾಲಯದಲ್ಲಿ ಪರಿಹಾರ ದೊರೆಯುತ್ತದೆ ಗ್ರಾಹಕರು ಇದರ ಬಗ್ಗೆ ಮಾಹಿತಿ ಹೊಂದಿ, ತಮ್ಮ ಹಕ್ಕುಗಳನ್ನು ಪಡೆಯಬೇಕು. ಡಿಜಿಟಲ್ ನ್ಯಾಯದಾನದ ಪ್ರಕ್ರಿಯೆಯಿಂದಾಗಿ ಇಂದು ತ್ವರಿತಗತಿಯಲ್ಲಿ ನ್ಯಾಯದಾನ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ ಎನ್ ಮತ್ತಿತರರು ಉಪಸ್ಥಿತರಿದ್ದರು.
ಬಳಕೆದಾರರ ವೇದಿಕೆ ಸಂಚಾಲಕ ಯು.ಜಿ. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಂ. ತೇಲಿ ಸ್ವಾಗತಿಸಿ, ಬಳಕೆದಾರರ ವೇದಿಕೆ ವಿಶ್ವಸ್ಥ ಎಂ ರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿಬಾಯಿ ವಂದಿಸಿದರು.







