ಹೊಸ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದೆಯೇ ಹೊರತು ಪರಿಷ್ಕರಣೆ ಅಲ್ಲ: ಶಿವಸುಂದರ್

ಉಡುಪಿ, ಜ.25: ಇಂದು ದೇಶಾದ್ಯಂತ ನಡೆಯುತ್ತಿರುವುದು ಮತದಾರರ ಪಟ್ಟಿ ಪರಿಷ್ಕಣೆ ಅಲ್ಲ. ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ. ಎಸ್ಐಆರ್ ಅಂದರೆ ಮೋದಿ ಸರಕಾರ 140 ಕೋಟಿ ಭಾರತೀಯರ ಮೇಲೆ ಹಾಕಿದ ಎಫ್ಐಆರ್ ಆಗಿದೆ. ನಾವು ದಾಖಲೆ ಕೊಟ್ಟು ವಿದೇಶಿಗರಲ್ಲ ಸ್ವದೇಶಿಗರೆಂಬುದನ್ನು ಸಾಬೀತು ಪಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಆರೋಪಿಸಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಸಹ ಸಂಘಸಂಸ್ಥೆಗಳ ವತಿಯಿಂದ ಉಡುಪಿ ಜಾಮಿಯಾ ಮಸೀದಿ ಸಭಾಂಗಣದಲ್ಲಿ ರವಿವಾರ ಆಯೋಜಿಸ ಲಾದ ಎಸ್ಐಆರ್ ಮತ್ತು ಮತದಾರರ ಪಟ್ಟಿ ಮ್ಯಾಪಿಂಗ್ ಕುರಿತ ಜನ ಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸರಕಾರಿ ಅಧಿಕಾರಿ ನಾನು ಭಾರತೀಯ ಅಥವಾ ಅಲ್ಲವೋ ಎಂಬುವುದನ್ನು ತೀರ್ಮಾನ ಮಾಡುತ್ತಿದ್ದಾನೆ. ಇಲ್ಲಿ ನಮ್ಮ ಅಹವಾಲಿಗೆ ಯಾವುದೇ ಅವಕಾಶವೇ ಇಲ್ಲದಂತಾಗಿದೆ. ದಾಖಲಾತಿಗಳನ್ನು ಈ ಹಿಂದೆ ಚುನಾವಣಾ ಆಯೋಗ ಮನೆಗೆ ಬಂದು ಸಂಗ್ರಹಿಸುತ್ತಿದ್ದರು. ಇದೀಗ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೊರಿಸಲಾಗಿದೆ ಎಂದರು.
ಅಲ್ಪಸಂಖ್ಯಾತರ ಕುರಿತು ಅನುಮಾನ ಪಡುವ ದುಸ್ಥಿತಿ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟವನ್ನು ಹಿಂದು ಮುಸ್ಲಿಮರು ಸೇರಿ ಕಟ್ಟಿದರು. ಈ ದೇಶದಲ್ಲಿ ಬಹುತೇಕ ಬಡವರು ಇದ್ದಾರೆ. ಅವರಿಗೆ ಮತದಾನದ ಹಕ್ಕು ನೀಡಿದರೆ ಬಡವರ ಪರ ಸರಕಾರ ಬರಬಹುದು ಎಂಬ ಭಯ ಈಗಿನ ವ್ಯವಸ್ಥೆಗೆ ಇದೆ ಎಂದು ಅವರು ಹೇಳಿದರು.
ಮತದಾನ ಪ್ರಕ್ರಿಯೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಎಲ್ಲರನ್ನು ಚುನಾವಣೆಯಲ್ಲಿ ಒಳಗೊಳ್ಳುವುದು ಆಯೋಗದ ಕೆಲಸ ಹೊರತು, ಮತದಾರರನ್ನು ಹೊರಗೆ ಇಡುವುದು ಅಲ್ಲ. ಪ್ರಜಾತಾಂತ್ರ ನಿಂತಿರುವುದೇ 18 ವರ್ಷ ತುಂಬಿರುವ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡುವುದರಲ್ಲಿ. ಈ ದೇಶದ ನಾಗರಿಕನಾಗಲು ನನ್ನ ಹುಟ್ಟು ಒಂದು ಕಾರಣವಾಗಬಾರದು. ಜಾತಿ, ಪ್ರದೇಶ, ಭಾಷೆ, ಧರ್ಮ ಪರಿಗಣನೆಗೆ ಬರಲೇ ಬಾರದು ಎಂದು ಅವರು ತಿಳಿಸಿದರು.
ಮತದಾನ ಪಟ್ಟಿ ಪರಿಷ್ಕೃತ ನಿಯಮದ ಪ್ರಕಾರ ಚುನಾವಣಾ ಆಯೋಗದ ಕೆಲಸ, ಕೂಡುವುದು, ಕಳೆಯುವುದು, ಹೊಸ ಹೆಸರು ಸೇರ್ಪಡೆ ಮಾತ್ರವೇ ಆಗಿದೆ. 18 ವರ್ಷ ತುಂಬಿದ ಮೇಲೆ ಮತದಾನದ ಹಕ್ಕು ನೀಡುವುದು ಸರಕಾರದ ಕರ್ತವ್ಯ ಹಾಗೂ ಅದನ್ನು ಪಡೆಯುವುದು ನಮ್ಮ ಹಕ್ಕು. ಆದರೆ ಎಸ್ಐಆರ್ ಎಂಬುವುದು ಈವರೆಗೆ ಕೇಳದ ಹಾಗೂ ಇಲ್ಲದ ನಿಯಮ. ಎಸ್ಐಆರ್ಗೆ ಯಾವುದೇ ಸಂವಿಧಾನಬದ್ಧವಾದ ನಿಯಮಗಳಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಬಾಳ್ವೆ ಸಂಚಾಲಕ ಕೆ.ಫಣಿರಾಜ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಜಾಮಿಯಾ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಝೀಜ್ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಅಧ್ಯಕ್ಷ ನಿಸಾರ್ ಅಹ್ಮದ್ ಸಮಾರೋಪ ನುಡಿಗಳನ್ನಾಡಿದರು. ಸಾಮಾಜಿಕ ಹೋರಾಟಗಾರ ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
‘ನಮ್ಮದಲ್ಲದ ತಪ್ಪಿಗೆ ನಮಗೆ ಶಿಕ್ಷೆ’
2002 ಮತದಾರರ ಪಟ್ಟಿಯಲ್ಲಿ ನಮ್ಮ ತಂದೆ-ತಾಯಿ ಅಥವಾ ಅಜ್ಜ ಅಜ್ಜಿಯ ಹೆಸರು ಇರಬೇಕು. ಬೇರೆ ಬೇರೆ ಕಾರ್ಡುಗಳಲ್ಲಿ ಬೇರೆ ಬೇರೆ ಹೆಸರು ನಮೋದಿಸಿರುತ್ತಾರೆ. ಇದು ನಮ್ಮ ತಪ್ಪಲ್ಲ. ನಮ್ಮದಲ್ಲದ ತಪ್ಪಿಗೆ ನಮಗೆ ಶಿಕ್ಷೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಶಿವಸುಂದರ್ ಟೀಕಿಸಿದರು.
ಕರ್ನಾಟಕದಲ್ಲಿ ಮ್ಯಾಪಿಂಗ್ ಶುರುವಾಗಿದೆ. ಬಿಎಲ್ಓ ಮನೆಗೆ ಹೋಗಬೇಕು. ಕನಿಷ್ಠ ಮೂರು ಬಾರಿ ಮನೆಗೆ ಭೇಟಿಯಾಗಬೇಕು. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಮೂರು ಬಾರಿ ಭೇಟಿಯಾಗಿ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಬೇಕು. ಬಿಎಲ್ಒಗಳು ಮನೆ ಮನೆಗೆ ಬರುತ್ತಿಲ್ಲ. ಕಚೇರಿಯಲ್ಲೇ ಕುಳಿತು ಮ್ಯಾಪಿಂಗ್ ಮಡುತ್ತಿದ್ದಾರೆ. ಎರಡನೇ ಹಂತದಲ್ಲಿ ಬಿಎಲ್ಓ ಮನೆಗೆ ಬಂದು ಅರ್ಜಿ ಕೊಡುತ್ತಾರೆ. ಅದನ್ನು ತುಂಬಿ ಚುನಾವಣಾ ಆಯೋಗ ಕಚೇರಿಗೆ ನೀಡಬೇಕು. ನೀಡದಿದ್ದರೆ ನಿಮ್ಮ ಹೆಸರು ಮತದಾನ ಪಟ್ಟಿಯಿಂದ ತೆಗೆಯಬಹುದಾದ ಸಾಧ್ಯತೆ ಇದೆ ಎಂದರು.







