ಮಹಿಳೆಯ ಕುತ್ತಿಗೆಯಿಂದ ಸರ ಅಪಹರಣ

ಕಾಪು, ಅ.18: ಕಟಪಾಡಿಯ ವಿಶ್ವನಾಥ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ ಮುಗಿಸಿ ಮೂಡಬೆಟ್ಟು ಗ್ರಾಮದ ಕಟಪಾಡಿ ಒಳ ರಸ್ತೆಯಲ್ಲಿ ಕಲ್ಲಾಪು ಕಡೆಗೆ ನಡೆದುಕೊಂಡು ಹೋಗುತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಹವಳದ ಸರವನ್ನು ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಸೆಳೆದು ಕೊಂಡು ಹೋಗಿರುವ ಘಟನೆ ಮಂಗಳವಾರ ಅಪರಾಹ್ನ 1:15ರ ಸುಮಾರಿಗೆ ನಡೆದಿದೆ.
ಭವಾನಿ (57) ಎಂಬವರು ಪರಿಚಯದ ಬೇಬಿ ಎಂಬವರೊಂದಿಗೆ ಕಲ್ಲಾಪು ಕಡೆಗೆ ನಡೆದುಕೊಂಡು ಹೋಗುತಿದ್ದಾಗ ಕಲ್ಲಾಪು ಕಡೆಯಿಂದ ಮೋಟಾರು ಸೈಕಲ್ನಲ್ಲಿ ಬಂದ ಒಬ್ಬ ಅವರ ಕುತ್ತಿಗೆ ಕೈಹಾಕಿ ಎರಡೆಳೆ ಕರಿಮಣಿ ಸರ ಹಾಗೂ ಹವಳದ ಸರ ವನ್ನು ಎಳೆದುಕೊಂಡು ಕಟಪಾಡಿ ಕಡೆಗೆ ಹೋಗಿರುವುದಾಗಿ ಕಾಪು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಐದು ಪವನ್ ತೂಕದ ಕರಿಮಣಿ ಸರದ ಎರಡು ತುಂಡು ಸ್ಥಳದಲ್ಲಿ ಸಿಕ್ಕಿದ್ದು, ಉಳಿದಿದ್ದನ್ನು ಬೈಕ್ ಸವಾರ ಕಿತ್ತುಕೊಂಡು ಹೋಗಿದ್ದಾನೆ. ಕರಿಮಣಿ ಸರದ ಮೌಲ್ಯ 1.60 ಲಕ್ಷರೂ.ಗಳಾದರೆ, ಹವಳದ ಸರದ ಮೌಲ್ಯ 1.80 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ತನಿಖೆ ನಡೆಸುತಿದ್ದಾರೆ.





