ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಹತ್ಯೆ ಪ್ರಕರಣ| ಮೂವರು ಬಸ್ ಚಾಲಕರಿಂದ ಕೃತ್ಯ: ಎಸ್ಪಿ ಹರಿರಾಮ್ ಶಂಕರ್

ಮಲ್ಪೆ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ನನ್ನು ಮೂವರು ದುಷ್ಕರ್ಮಿಗಳು ಮಾರಕಾಯಧಗಳಿಂದ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಕೊಲೆ ನಡೆದ ಕೊಡವೂರು ಸಾಲ್ಮರದಲ್ಲಿರುವ ಮನೆಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಈ ಕೃತ್ಯವನ್ನು ಆತನ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಮೂವರು ಆರೋಪಿಗಳು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೈಫುದ್ದಿನ್ ವಿರುದ್ಧ ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಉಡುಪಿ ಮತ್ತು ಮಲ್ಪೆ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾರೆ. ಎರಡು ಕೊಲೆ ಪ್ರಕರಣದ ನೇರ ಆರೋಪಿಯಾಗಿದ್ದಾನೆ ಎಂದರು.
ಬೆಳಗ್ಗೆ 10 ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ. ಮೂರು ಜನ ಆರೋಪಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಆರೋಪಿಗಳು AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದರು.
ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿದ್ದಾರೆ. ದೇಹದ ಹಲವೆಡೆ ಇರಿದ ಗಾಯಗಳಿವೆ ಎಂದು ಅವರು ತಿಳಿಸಿದರು.





