ಪೊಕ್ಸೊ ಕಾಯಿದೆಯಡಿ ಜೀವಾವಧಿ ಶಿಕ್ಷೆ ನೀಡಲು ಅವಕಾಶ : ನ್ಯಾ.ಪುರುಷೋತ್ತಮ

ಉಡುಪಿ, ನ.22: ಇತರ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸುವ ವೇಳೆ ನ್ಯಾಯಾಧೀಶರು ತಮ್ಮ ಪರಮಾಧಿಕಾರವನ್ನು ಬಳಸಲು ಅವಕಾಶವಿದೆ. ಆದರೆ ಪೋಕ್ಸೊ ಕಾಯ್ದೆಯಲ್ಲಿ ನ್ಯಾಯಧೀಶರು ಕನಿಷ್ಠ 10 ವರ್ಷ ಶಿಕ್ಷೆಯನ್ನು ನೀಡಲೇಬೇಕಾಗಿದೆ. ಅದೇ ರೀತಿ ಜೀವಾವಧಿ ಶಿಕ್ಷೆಯನ್ನು ನೀಡಲು ಅವಕಾಶವಿದೆ ಎಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಂ.ಪುರುಷೋತ್ತಮ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಶುಕ್ರವಾರ ನಡೆದ ಪೋಕ್ಸೊ ಕಾಯ್ದೆಯ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಶ್ಲೀಲ ಪೋಟೋ ನೋಡುವುದು ಅಪರಾಧವಾಗಿದೆ. ಪ್ರಕರಣದ ಬಗ್ಗೆ ತಿಳಿದು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡದೇ ಇರುವುದು, ಸುಳ್ಳು ಪ್ರಕರಣ ದಾಖಲಿಸುವುದು ಈ ಎಲ್ಲಾ ಕೃತ್ಯಗಳನ್ನು ತಪ್ಪು ಎಂದು ಕಾಯ್ದೆ ತಿಳಿಸಿದ್ದು, ಶಿಕ್ಷೆಯನ್ನು ವಿಧಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಈ ಕಾಯ್ದೆಯ ಬಗ್ಗೆ ತಿಳಿದುಕೊಂಡು, ಇತರರಿಗೂ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿ ಎಂದರು.
2012ರ ನ.14ರಂದು ಪೋಕ್ಸೊ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 46 ಸೆಕ್ಷನ್ ಗಳಿವೆ. ಈ ಕಾಯ್ದೆಯನ್ನು 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಾಗುವ ಶೋಷಣೆ, ಲೈಂಗಿಕ ಶೋಷಣೆಗೆ ಒಳಗಾದವರಿಗೆ ನ್ಯಾಯದೊರಕಿಸಿ ಕೊಡಲೆಂದು ರೂಪಿಸಲಾಗಿದೆ. ಕೆಲವು ಯೌವನದ ಪೇಮಾಂಕುರವು, ಆಕರ್ಷಣೆಗೆ ಒಳಗಾಗಿ ಪರಸ್ಪರ ಒಪ್ಪಿಗೆಯಿಂದ ಒಂದಾಗಿದ್ದರೂ, ಪೋಷಕರ ಒತ್ತಡದಿಂದ ಸುಳ್ಳು ಪೋಕ್ಸೊ ಪ್ರಕರಣಗಳು ದಾಖಲಾದ ನಿದರ್ಶನಗಳಿವೆ. ಆರೋಪ ಸಾಭೀತಾಗಿ ಶಿಕ್ಷೆ ಪ್ರಕಟಗೊಂಡರೆ ಆತನ ಜೀವನವೇ ಬರ್ಬಾದ್ ಆಗುತ್ತದೆ. ಹೀಗಾಗಿ ಕಾಯ್ದೆಯ ಕುರಿತಾಗಿ ಜಾಗೃತಿ ಅತ್ಯಗತ್ಯ ಎಂದು ಅವರು ತಿಳಿಸಿದರು.
ಕಾಲದಿಂದ ಕಾಲಕ್ಕೆ ಕಾನೂನುಗಳು ಬದಲಾಗುತ್ತಿರುತ್ತವೆ. ಅನೇಕ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಆದರೆ ಹಳ್ಳಿಯಲ್ಲಿ ನಮ್ಮ ಹಿರಿಯರು ಕಟ್ಟಿದ ಗಾದೆ ಮಾತುಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಮಕ್ಕಳನ್ನು ದೇವರಂತೆ ಕಾಣು ಎಂದು ಶತಮಾನಗಳ ಹಿಂದೆಯೇ ಹಿರಿಯರು ತಿಳಿಸಿದ್ದರು. ಇಂದು ಮಕ್ಕಳನ್ನು ದೇವರಂತೆ ಕಂಡರೇ ಪೋಕ್ಸೊ ಪ್ರಕರಣಗಳು ದಾಖಲಾಗುವುದು ತಪ್ಪುತ್ತದೆ ಎಂದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಪ್ರೊ.ಡಾ.ನಿರ್ಮಲಾ ಕುಮಾರಿ ಮಾತನಾಡಿ, ಭಾರತದ ಸಂವಿಧಾನ 15ನೇ ಅನುಚ್ಛೇದವು ಯಾರನ್ನು ತಾರತಮ್ಯ ಮಾಡಬಾರದು ಎಂದು ಹೇಳುವುದಲ್ಲದೇ, ಶೋಷಣೆಯನ್ನು ತಡೆಗಟ್ಟಲು ವಿಶೇಷ ಕಾಯ್ದೆಯನ್ನು ರಚಿಸಲು ಅವಕಾಶವನ್ನು ಕಲ್ಪಿಸಿದೆ. ಹೀಗಾಗಿ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾನೂನು ಆಯೋಗವು ಈಗಾಗಲೇ 227 ವರದಿಗಳನ್ನು ಸಿದ್ದಪಡಿಸಿದ್ದು, ಕಾಲ ಕಾಲಕ್ಕೆ ಕಾನೂನು ರಚಿಸುತ್ತವೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ರಾಘವೇಂದ್ರ ಉಪಸ್ಥಿತರಿದ್ದರು. ಪತ್ರಕರ್ತ ರಕ್ಷಿತ್ ಬೆಳಪು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ನವ್ಯಾ ವಂದಿಸಿದರು. ನಿಶಾ ನಿರೂಪಿಸಿದರು.







