ಮಂದರ್ತಿಯಲ್ಲಿ ಹೊಸ ಸರಕಾರಿ ಶಾಲೆ ಪ್ರಾರಂಭಿಸಲು ಶಿಕ್ಷಣ ಸಚಿವರಿಗೆ ಮನವಿ

ಕುಂದಾಪುರ, ಫೆ.6: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಮಂದರ್ತಿಯಲ್ಲಿ ಹೊಸದಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾರಂಭಿಸಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ, ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಹೆಗ್ಗುಂಜೆ ಗ್ರಾಮದ ಮಂದರ್ತಿ ಶ್ರೀದುರ್ಗಪರಮೇಶ್ವರಿ ದೇವಸ್ಥಾನದ ವತಿಯಿಂದ ಈಗಾಗಲೇ ಅನುದಾನಿತ ಪ್ರೌಢ ಶಾಲೆ ಮತ್ತು ಅನುದಾನ ಸಹಿತ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭಿಸಿ ದ್ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗಲಿದೆ. ಅಲ್ಲಿಯೇ ಸಮೀಪದಲ್ಲಿರುವ ಮಂದರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 153 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರ ಕೊರತೆ ಯಿಂದ ಶಾಲೆ ಮುಚ್ಚುವುದಾಗಿ ಆಡಳಿತ ಮಂಡಳಿಯು ತಿಳಿಸಿರುವುದರಿಂದ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಪರದಾಡುವಂತಾಗುತ್ತದೆ.
ಆದ್ದರಿಂದ ಈ ವ್ಯಾಪ್ತಿಯಲ್ಲಿ ಸರಕಾರದಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನಕ್ಕೆ ಸರ್ವೆ ನಂರ್ಬ 167/71ಬಿ ರಲ್ಲಿ ಹಂಚಿಕೆಯಾಗಿರುವ 0.88ಸೆಂಟ್ಸ್ ಜಾಗದಲ್ಲಿ ಸರಕಾರಿ ಶಾಲೆ ಪ್ರಾರಂಭಿಸಲು ಅನುಮತಿ ನೀಡಿದ್ದಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ದೇವಸ್ಥಾನದ ವತಿಯಿಂದ ನೀಡುವುದಾಗಿ ಆಡಳಿತ ಮಂಡಳಿಯು ಲಿಖಿತವಾಗಿ ನೀಡಿದೆ. ಆದುದರಿಂದ ಹೆಗ್ಗುಂಜಿ ಗ್ರಾಮದ ಸರ್ವೆ ನಂ.1671ಬಿ ನಲ್ಲಿ 2026-27ನೇ ಸಾಲಿನಿಂದ ಸರಕಾರಿ ಶಾಲೆಯನ್ನು ಪ್ರಾರಂಭಿಸಲು ತಮ್ಮ ಅನುಮತಿ ನೀಡುವಂತೆ ಶಾಸಕರು ಸಚಿವರಲ್ಲಿ ಮನವಿ ಮಾಡಿದರು.






