ಉಸ್ತುವಾರಿ ಸಚಿವರ ಭೇಟಿಯಿಂದ ಪರಶುರಾಮನ ಪ್ರತಿಮೆಯ ಸತ್ಯಾಸತ್ಯತೆ ಬಯಲು: ಶುಭದ ರಾವ್

ಬೈಲೂರಿನಲ್ಲಿರುವ ಥೀಮ್ ಪಾರ್ಕಿನ ಕಟ್ಟಡದ ಮೇಲೆ ಸ್ಥಾಪಿಸಿರುವ ಪರಶುರಾಮನ ಕಂಚಿನ ಪ್ರತಿಮೆ (Photo credit: wikipedia)
ಕಾರ್ಕಳ, ಸೆ.27: ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕಿಗೆ ಬೇಟಿ ನೀಡಿ ಅಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆಯ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರತಿಮೆಯ ಸತ್ಯಾಸತ್ಯತೆ ಬಯಲಾಗಿದೆ. ಜನರ ಧಾರ್ಮಿಕ ನಂಬಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು ಕಂಚಿನ ಪ್ರತಿಮೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ನಂಬಿಕೆ ದ್ರೋಹ ಎಸಗಿದವರು ಮತ್ತು ಅದನ್ನು ಸಮರ್ಥಿಸುವವರು ಎಂದೂ ಕ್ಷಮೆಗೆ ಅರ್ಹರಲ್ಲ ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಮೆಯ ಬಗ್ಗೆ ತಾನು ಮಾಡಿದ ತಪ್ಪನ್ನು ಮರೆಮಾಚಲು ಬೈಲೂರು ಗ್ರಾಮದ ಜನರನ್ನು ಎತ್ತಿ ಕಟ್ಟುವ ಪ್ರಯತ್ನಗಳು ನಡೆಯಿತು, ಇದರಿಂದ ಪ್ರಭಾವಿತರಾದ ಸ್ಥಳಿಯರು ಪ್ರತಿಭಟನೆ, ಪಾದಯಾತ್ರೆಯ ಘೋಷಣೆಯನ್ನೂ ಮಾಡಿದರು, ಪ್ರತಿಮೆಯ ಬಗ್ಗೆ ಪ್ರಶ್ನಿಸಿದವರನ್ನು ಕೆಟ್ಟ, ಅವಮಾನಕರ ಪದಗಳನ್ನು ಬಳಸಿ ನಿಂದಿಸಲಾಯಿತು, ಆದರೆ ಸತ್ಯ ತಡವಾದರೂ ಬಯಲಾಗಿದೆ ಕೊನೆಗೂ ಸುಳ್ಳಿನ ಗೋಪುರ ಕುಸಿದಿದೆ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬಂತೆ ಅದೇ ಕಂಚಿನ ಪ್ರತಿಮೆ ಎಂದು ನಂಬಿದ್ದ ಜನರು ಮೋಸ ಹೋಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







