ಬೈಲೂರು ಪರುಶುರಾಮ ಮೂರ್ತಿ ಬದಲಾವಣೆ | ಓಟಿಗಾಗಿ ನಕಲಿ ಪ್ರತಿಮೆ ಸ್ಥಾಪನೆ ಸಾಬೀತು: ಉಡುಪಿ ಬ್ಲಾಕ್ ಕಾಂಗ್ರೆಸ್ ಆರೋಪ

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್
ಉಡುಪಿ, ಅ.13: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮನ ನಕಲಿ ಮೂರ್ತಿಯನ್ನು ತೆರವುಗೊಳಿಸಿ ಹೊಸ ಮೂರ್ತಿ ಪ್ರತಿಷ್ಠಾಪಿಸುವ ಕೆಲಸ ಆರಂಭಿಸಲಾಗಿದೆ. ಈ ಮೊದಲು ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಹೇಳಿ ವಂಚಿಸಿದ್ದ ಬಿಜೆಪಿಯ ಶಾಸಕ ಸುನೀಲ್ ಕುಮಾರ್ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ನಕಲಿ ಮೂರ್ತಿ ಸ್ಥಾಪನೆ ಚುನಾವಣೆಯ ಉದ್ದೇಶಕ್ಕೆ ಜನರಿಂದ ಮತ ಪಡೆಯಲು ಸುನೀಲ್ ಕುಮಾರ್ ಮಾಡಿದ ಹುನ್ನಾರ ಎಂಬುದು ಸಾಬೀತಾಗಿದೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ.
1.58 ಎಕರೆ ಗೋಮಾಳದಲ್ಲಿ ಅಕ್ರಮವಾಗಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿ ಚುನಾವಣೆ ಉದ್ದೇಶದಿಂದ ಅವಸರದಲ್ಲಿ ಥೀಮ್ ಪಾರ್ಕ್ ಉದ್ಘಾಟನೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದ್ದರು. ದೊಡ್ಡ ಮಟ್ಟದ ಸದ್ದು ಮಾಡಿ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸುನೀಲ್ ಕುಮಾರ್ ಅವರ ನಿಜ ಬಣ್ಣ ಬಯಲಾಗಿದೆ. ಅರ್ಧ ಭಾಗವಷ್ಟೇ ಕಂಚಿನ ಪ್ರತಿಮೆಯಾಗಿದ್ದು ಉಳಿದ ಅರ್ಧ ಭಾಗವು ಸಿಮೆಂಟ್ ಅಥವಾ ಇತರ ಯಾವುದೇ ವಸ್ತುವಿನಿಂದ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದರು.
ಇದು ಹಿಂದೂಗಳು ಪೂಜಿಸಿಕೊಂಡು ಬಂದಿರುವ ಪರಶುರಾಮನಿಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಸದಾ ಹಿಂದುತ್ವ ಎಂದು ಬಡಾಯಿಕೊಚ್ಚುವ ಸುನೀಲ್ ಕುಮಾರ್ ತಮ್ಮ ಲಾಭಕ್ಕಾಗಿ ಯಾವುದೇ ರೀತಿಯ ಮೋಸ ಮಾಡಲು ಸಿದ್ದ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಅವರು ದೂರಿದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದು ಕಂಚಿನ ಮೂರ್ತಿಯಲ್ಲ ಎಂದು ಒಪ್ಪಿಕೊಂಡಿದ್ದರು. ಅದರ ಬಳಿಕ ಕಳೆದೆರಡು ದಿನಗಳಿಂದ ನೈಜ ಮೂರ್ತಿಯ ಭಾಗಗಳು ದೊಡ್ಡ ದೊಡ್ಡ ಲಾರಿಗಳಲ್ಲಿ ಕಾರ್ಕಳಕ್ಕೆ ಆಗಮಿಸಿದ್ದು ಮೂರ್ತಿಯ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಜನರಿಗೆ ಇಷ್ಟೊಂದು ದೊಡ್ಡ ಮೋಸ ಮಾಡಿದ್ದಲ್ಲದೆ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿರುವ ಬಿಜೆಪಿಯ ಶಾಸಕ ಸುನೀಲ್ ಕುಮಾರ್ ಇದಕ್ಕೆ ನೇರ ಹೋಣೆಗಾರರಾಗಿದ್ದಾರೆ. ಈಗಾಗಲೇ ಹಳೆಯ ಮೂರ್ತಿಗಾಗಿ ಹಣವನ್ನು ಕೂಡ ಪಾವತಿಸಲಾಗಿದ್ದು ಮತ್ತೆ ಹೊಸ ಮೂರ್ತಿ ಪ್ರತಿಷ್ಠಾಪನೆ ಹೆಸರಿನಲ್ಲಿ ಹಣವನ್ನು ಪೋಲು ಮಾಡಲಾಗುತ್ತಿದೆ. ಇವೆಲ್ಲವುದರ ಬಗ್ಗೆ ವಿಸ್ತೃತ ತನಿಖೆಯ ನಡೆಯಬೇಕು ಮತ್ತು ಇದರಿಂದ ಆಗಿರುವ ನಷ್ಟವನ್ನು ಸ್ವತಃ ಸುನೀಲ್ ಕುಮಾರ್ ತಮ್ಮ ವೈಯುಕ್ತಿಕ ಖರ್ಚಿನಿಂದ ನೀಡುವಂತಾಗಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದರು.
ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಸರಕಾರ ವಹಿಸಬೇಕು. ಹಿಂದುತ್ವದ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆ ಗಳೊಂದಿಗೆ ಆಟವಾಡಿರುವ ಶಾಸಕ ಸುನೀಲ್ ಕುಮಾರ್ ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಜನರು ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಪ್ರಕಟನೆಯಲ್ಲಿ ಹೇಳಿದ್ದಾರೆ.







