Baindur | 108 ಸೇವೆ ಸರಿಪಡಿಸಲು ಆಗ್ರಹಿಸಿ ಸಮಾಜಕೀಯ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ

ಬೈಂದೂರು : ಸಮಾಜಕೀಯ ಸೇನೆಯ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದಲ್ಲಿ 108 ಆಂಬ್ಯುಲೆನ್ಸ್ ಸೇವೆ ಸರಿಪಡಿಸಲು ಆಗ್ರಹಿಸಿ ಸೋಮವಾರ ಬೈಂದೂರು ತಾಲೂಕು ಆಡಳಿತದ ಸೌಧದ ಕಚೇರಿ ಎದುರು 'ಜೂನ್ 8- ಸರಿ ಮಾಡೋಣ 108' ಹೆಸರಿನಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಯಿತು.
ಸಮಾಜಕೀಯ ಸೇನೆಯ ಸ್ಥಾಪಕ ಸೈನಿಕ ಕೃಷ್ಣ ಪೂಜಾರಿ ಮಾತನಾಡಿ, ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ಸರಕಾರಿ ಸೇವೆಗಳು ಸಮರ್ಪಕವಾಗಿ ದೊರಕುತ್ತಿಲ್ಲ. 108 ಆಂಬ್ಯುಲೆನ್ಸ್ ಸೇವೆ ಈ ಭಾಗದ ಜನರಿಗೆ ಸಿಗುತ್ತಿಲ್ಲ. ಸರಕಾರಿ ಅಧಿಕಾರಿಗಳು ಜನರ ಸೇವೆ ಮಾಡಲು ನಿಯುಕ್ತಿಗೊಂಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಪಘಾತ ಸಂಭವಿಸಿದಾಗ ಆಂಬ್ಯುಲೆನ್ಸ್ ಸೇವೆ ಬಹುಮುಖ್ಯ. ಅಪಘಾತ, ಅವಘಡ ಹಾಗೂ ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಒಯ್ಯಲು, ತುರ್ತು ಚಿಕಿತ್ಸಾ ಪರಿಕರಗಳನ್ನು ಹಾಗೆ ಸಿಬ್ಬಂದಿಗಳನ್ನು ಹೊಂದಿದ ಅತ್ಯಾಧುನಿಕ ಆರೋಗ್ಯ ಕವಚ 108 ಉಚಿತ ಎಂಬುಲೆನ್ಸ್ ಸೇವೆ ಆರಂಭಿಸಿದ್ದು, ಪ್ರಾರಂಭದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಿದ್ದು, ಈ ವ್ಯವಸ್ಥೆ ಪ್ರಸ್ತುತ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೂಲ ಉದ್ದೇಶಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತುರ್ತು ಸಂದರ್ಭ ದೂರದ ಕುಂದಾಪುರಕ್ಕೆ ಚಿಕಿತ್ಸೆಗಾಗಿ ತೆರಳಬೇಕಾದ ಅವಶ್ಯಕತೆಯಿರುವುದರಿಂದ ಸಕಾಲದಲ್ಲಿ ಅಂಬುಲೆನ್ಸ್ ಸೇವೆ ಸಿಗದೆ ಸಾವು ನೋವು ಸಂಭವಿಸುತ್ತಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಹುಬ್ಬಳ್ಳಿ ಮನವಿ ಸ್ವೀಕರಿಸಿದರು. ಈ ವೇಳೆ ಬೈಂದೂರು ತಹಶೀಲ್ದಾರ್ ಡಿ.ಜಿ.ಮಹಾತ್ ಇದ್ದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ, ದಸಂಸ ಭೀಮ ಘರ್ಜನೆಯ ರಾಘವೇಂದ್ರ ಶಿರೂರು, ಸಮಾಜಸೇನೆಯ ಸೈನಿಕರಾದ ಹರ್ಷ, ರಾಘವೇಂದ್ರ ಹೇರಂಜಾಲು, ಮಣಿರಾಜ್ ಹೇರಂಜಾಲು, ತೃಪ್ತಿ ಶೆಟ್ಟಿ , ಪ್ರಮುಖರಾದ ಗೌರಿ ದೇವಾಡಿಗ, ಸುರೇಶ್ ಬಟವಾಡಿ, ಜಗದೀಶ ದೇವಾಡಿಗ, ಅರವಿಂದ ಪೂಜಾರಿ ನಾಡ, ರಾಘವೇಂದ್ರ ದೇವಾಡಿಗ ಬೈಟು, ಗಣೇಶ ಪೂಜಾರಿ, ಫಯಾಜ್ ಅಲಿ, ಆಕಾಶ್ ಪೂಜಾರಿ, ಅಕ್ಷಯ ತಗ್ಗರ್ಸೆ, ವೇದನಾಥ ಶೆಟ್ಟಿ, ಪ್ರಶಾಂತ್ ಮೊಯ್ಲಿ, ಜಗದೀಶ ಗಂಗೊಳ್ಳಿ, ಸುಧೀರ್ ಮಲ್ಯಾಡಿ, ಉಮೇಶ ಬಿಜೂರು, ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ. ರಾಜೇಶ್, ಮುಖಂಡರಾದ ಸುರೇಶ ಬ್ರಹ್ಮಾವರ, ಮುಕಾಂಬಿಕಾ, ಮಂಜುನಾಥ, ಶ್ವೇತಾ ರಾವ್, ಮೊದಲಾದವರು ಹಾಜರಿದ್ದರು.
ಜನಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಸರಕಾರಿ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಬುಲೆನ್ಸ್ ವ್ಯವಸ್ಥೆಗಾಗಿ ಬೀದಿಗಿಳಿದು ಹೋರಾಡುವ ದುಸ್ಥಿತಿ ಬಂದಿದ್ದು, ಇದು ಕರಾವಳಿಗೆ ಶೋಭೆ ತರುವ ವಿಚಾರವಲ್ಲ. ಈಗಿನ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಸೂಕ್ತ ಸ್ಪಂದನೆಯ ಭರವಸೆ ನೀಡಿದ್ದು, ಶೀಘ್ರ ಇಲ್ಲಿನ ಸಹಿತ ಹಳ್ಳಿಹಳಿಗಳ ಆರೋಗ್ಯ ಕೇಂದ್ರ ಹಾಗೂ 108 ಆಂಬುಲೆನ್ಸ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯವಾಗಬೇಕು. ಇಲ್ಲವಾದಲ್ಲಿ ಜನರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಲಾಗುತ್ತದೆ.
-ಡಾ. ರವಿ ಶೆಟ್ಟಿ ಬೈಂದೂರು, ಕರ್ನಾಟಕ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ






