ದೇಶದ ರಕ್ಷಣೆ ಕುರಿತು ಬ್ಯಾರೀಸ್ ಸಂಸ್ಥೆಯ ಚಿಂತನೆ ಶ್ಲಾಘನೀಯ: ಜಯಪ್ರಕಾಶ್ ಹೆಗ್ಡೆ

ಕುಂದಾಪುರ : ಶಾಲಾ ಮಟ್ಟದಲ್ಲಿಯೇ ಭವಿಷ್ಯದ ಚಿಂತನೆ ವಿದ್ಯಾರ್ಥಿಗಳಲ್ಲಿರಬೇಕು. ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಅಗತ್ಯ ತರಬೇತಿ ಪಡೆಯಬೇಕು. ದೇಶದ ರಕ್ಷಣೆಗಾಗಿ ಮಕ್ಕಳನ್ನು ತಯಾರಿಗೊಳಿಸುವ ಬ್ಯಾರೀಸ್ ಸಂಸ್ಥೆಯ ದೂರಗಾಮಿ ಚಿಂತನೆ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕುಂದಾಪುರ ಕೋಡಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನಲ್ಲಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರವಿವಾರ ಆಸಕ್ತ ವಿದ್ಯಾರ್ಥಿಗಳಿಗಾಗಿ ನಡೆದ ’ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ’ ಕುರಿತ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಇಂಜಿನಿಯರ್, ಮೆಡಿಕಲ್ ಕ್ಷೇತ್ರವಲ್ಲದೆ ಸಮಾಜದಲ್ಲಿ ಹಲವು ಉದ್ಯೋಗ ಕ್ಷೇತ್ರಗಳಿದೆ. ಸೇನೆ ಎಂಬುದು ಕೇವಲ ಉದ್ಯೋಗ ಅಲ್ಲ. ಅದೊಂದು ಗೌರವ. ಸೇನೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿಯಾದ ಬಳಿಕವೂ ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆ. ಉಡುಪಿ, ದ.ಕ ಜಿಲ್ಲೆಯ ಯುವ ಜನಾಂಗ ಪೊಲೀಸ್ ಇಲಾಖೆಗೆ ಸೇರುತ್ತಿಲ್ಲ. ಕೆಎಎಸ್, ಐಎಎಸ್ ಸ್ಫರ್ಧಾತ್ಮಕ ಪರೀಕ್ಷೆ ಬರೆಯುವುದು ಕಡಿಮೆಯಾಗಿದೆ. ದೇಶದ ರಕ್ಷಣೆಗೆ ಮುಂದಾಗುವ ಮನಸ್ಸು ಹಾಗೂ ಅಗತ್ಯ ತಯಾರಿ ಮಾಡಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿ. ಜಿಲ್ಲೆಯಲ್ಲಿಯೇ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಪುಣೆಯ ಅನೀಸ್ ಡಿಫೆನ್ಸ್ ಕರಿಯರ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಮತ್ತು ನಿರ್ದೇಶಕ ಅನೀಸ್ ಕುಟ್ಟಿ ವಿದ್ಯಾರ್ಥಿಗಳಿಗೆ ರಕ್ಷಣಾ ವಲಯದಲ್ಲಿರುವ ವಿವಿಧ ವೃತ್ತಿ ಅವಕಾಶಗಳು ಮತ್ತು ಅದರ ತಯಾರಿಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರುವ ಬಗ್ಗೆ, ಅಗ್ನಿವೀರರ ವಿಚಾರಗಳ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.
ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಸಯ್ಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ರಕ್ಷಣಾ ಸೇವೆಗೆ ಸೇರಲು ಕರಾವಳಿ ಭಾಗದ ಯುವಜನರು ಮನಸ್ಸು ಮಾಡುತ್ತಿಲ್ಲ. ಗೌರವಾನ್ವಿತ ಮತ್ತು ಅರ್ಥಪೂರ್ಣ ವೃತ್ತಿ ಆಯ್ಕೆಮಾಡಲು ಆಸಕ್ತಿ ಹೊಂದಿರುವ ವಿವಿಧ ವಿದ್ಯಾಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ನ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಡಾ.ಆಸೀಫ್ ಬ್ಯಾರಿ, ಡೀನ್ ಅಕಾಡೆಮಿಕ್ಸ್ ಡಾ.ಪೂರ್ಣಿಮಾ ಶೆಟ್ಟಿ, ಬ್ಯಾರೀಸ್ ಡಿ.ಎಡ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಹಾಜಿ ಕೆ.ಮೊಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ. ಜಯಶೀಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ನ ನಿರ್ದೇಶಕಿ ಹಾಗೂ ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಪಿಯುಸಿ ಉಪನ್ಯಾಸಕಿ ಲಮೀಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲೆ ಆಫ್ರಿನ್ ಖಾನ್ ವಂದಿಸಿದರು.







