ಬೆಂಗಳೂರು- ಮಂಗಳೂರು- ಕಾರವಾರ ನಡುವೆ ವಂದೇ ಭಾರತ್ ರೈಲಿಗೆ ಮನವಿ

ಉಡುಪಿ, ಡಿ.12: ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬಹುಕಾಲದ ನಿರೀಕ್ಷೆಯ ಬೆಂಗಳೂರು- ಮಂಗಳೂರು- ಉಡುಪಿ- ಕಾರವಾರ ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲನ್ನು ಶೀಘ್ರವಾಗಿ ಓಡಿಸಲು ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಕರಾವಳಿಯ ಜಿಲ್ಲೆಗಳನ್ನು ರಾಜಧಾನಿಯೊಂದಿಗೆ ಸಂಪರ್ಕಿಸಲು ವಂದೇ ಭಾರತ್ ನ ಅವಶ್ಯಕತೆಯನ್ನು ಕೋಟ ಅವರು ರೈಲ್ವೆ ಸಚಿವರಿಗೆ ವಿವರಿಸಿದರು. ಹಾಸನ, ಸಕಲೇಶಪುರ ವಿಭಾಗದಲ್ಲಿ ವಿದ್ಯುದ್ಧೀಕರಣ ಕಾರ್ಯ ಮುಗಿಯುತ್ತಾ ಬಂದಿದ್ದು, ಬೆಂಗಳೂರು ಮತ್ತು ಕಾರವಾರವನ್ನು ವಂದೇ ಭಾರತ್ ಮೂಲಕ ಬೆಸೆಯಲು ಇದು ಸಕಾಲವಾಗಿದೆ ಎಂದು ಸಂಸದರು ಮನವರಿಕೆ ಮಾಡಿದರು.
ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ವಂದೇ ಭಾರತ್ ಮೂಲಕ ಉತ್ತಮ ರೈಲ್ವೆ ಸೇವೆಗೆ ಅವಕಾಶವಾಗುತ್ತದೆ ಎಂದು ಕೋಟ ಮನವಿ ಮಾಡಿದ್ದು, ಘಾಟಿ ಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರದೊರೆಗಿನ ರೈಲ್ವೆ ಸೇವೆ ಉತ್ತಮಗೊಳಿಸಿ ವಂದೇ ಭಾರತ್ ಪರಿಚಯಿಸುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





