ಬ್ರಹ್ಮಾವರ ಎಚ್ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿ: ಅದೃಷ್ಟದ ಆಯ್ಕೆಯಲ್ಲಿ ಪಂಚಜನ್ಯ ವಿನ್ನರ್, ಜಯಕರ್ನಾಟಕ ರನ್ನರ್

ಉಡುಪಿ, ಫೆ.2: ಸಾಕಷ್ಟು ವಿವಾದಕ್ಕೆ ಕಾರಣವಾಗಿ ಅರ್ಧದಲ್ಲಿಯೇ ರದ್ದಾಗಿದ್ದ ಎಚ್ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟ ನಾಣ್ಯ ಚಿಮ್ಮುಗೆ ಮೂಲಕ ಆಯ್ಕೆ ಮಾಡಲಾಯಿತು. ಈ ಮೂಲಕ ಖುಷಿ ಅಮರ್ ಪಾಂಚಜನ್ಯ ತಂಡವು ವಿನ್ನರ್ ಆಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಪ್ರಶಸ್ತಿಯನ್ನು ಬೆಂಗಳೂರಿನ ಜಯ ಕರ್ನಾಟಕ ತಂಡ ಪಡೆದುಕೊಂಡಿತು.
ಉಡುಪಿಯ ಮಣಿಪಾಲ ಇನ್ ಹೊಟೇಲ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾ ಯಿತು. ವಿಜೇತ ತಂಡಗಳು ಸೇರಿದಂತೆ ಸೆಮಿಫೈನಲ್ ಪ್ರವೇಶಿಸಿದ ಇಝಾನ್ ಚೈತನ್ಯ ಫೈಸ್ರ್ ಎಚ್.ಎಂ ಎಕ್ತಾ ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡಗಳಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 20ಲಕ್ಷ ರೂ. ಮೊತ್ತವನ್ನು ಹಂಚಲಾಯಿತು.
ಎಚ್ಎಂಸಿ ಯುನೈಟೆಡ್ ವತಿಯಿಂದ ಬ್ರಹ್ಮಾವರದಲ್ಲಿ ಜ.23ರಿಂದ ಮೂರು ದಿನಗಳ ಕಾಲ ಎಚ್ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಆಯ್ದ 16 ತಂಡಗಳು ಭಾಗವಹಿಸಿತ್ತು. ಪ್ರಥಮ 25 ಲಕ್ಷ ರೂ. ಹಾಗೂ ದ್ವಿತೀಯ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಟೂರ್ನಿ ಆಯೋಜಕ ಶಕೀಲ್ ಹೊನ್ನಾಳ ಪಂದ್ಯಾಟದ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಚ್ಎಂಸಿ ಯುನೈಟೆಡ್ ಗೌರವಾಧ್ಯಕ್ಷ ಕೆ.ಪಿ ಇಬ್ರಾಹಿಂ ಮಟಪಾಡಿ, ಮಾಜಿ ಅಧ್ಯಕ್ಷ ಸಂಜೀವ ಕೋಟ್ಯಾನ್, ದಿ ಯುನಿವರ್ಸಲ್ ಐಡಲ್ನ ಚೇಯರ್ಮೆನ್ ಶಫೀ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.







