ಬ್ರಹ್ಮಾವರ | ರಸ್ತೆಯ ಹೊಂಡಕ್ಕೆ ಬಿದ್ದು ಮರಕ್ಕೆ ಢಿಕ್ಕಿ ಹೊಡೆದ ಟಿಪ್ಪರ್: ಚಾಲಕ ಸ್ಥಳದಲ್ಲಿಯೇ ಮೃತ್ಯು

ಉಡುಪಿ, ಡಿ.10: ರಸ್ತೆಯಲ್ಲಿನ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿದ ಟಿಪ್ಪರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಡಿ.10ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ನಿಟ್ಟೂರಿನ ರಂಜನ್ ಶೆಟ್ಟಿ ಎಂಬವರ ಮಾಲಕತ್ವದ ಟಿಪ್ಪರ್ನ್ನು ಚಾಲಕ ಶ್ರೀಕಾಂತ್, ನಿಟ್ಟೂರಿನಿಂದ ಜೆಲ್ಲಿ ಲೋಡ್ಗಾಗಿ ಚಲಾಯಿಸಿಕೊಂಡು ಹೋಗಿದ್ದರು. ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಹೋಗುತ್ತಿದ್ದ ಟಿಪ್ಪರ್, ರಸ್ತೆಯ ತಿರುವಿನಲ್ಲಿರುವ ರಸ್ತೆ ಹೊಂಡಕ್ಕೆ ಬಿದ್ದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಟಿಪ್ಪರ್, ರಸ್ತೆಯ ಬಲ ಬದಿಯ ದೊಡ್ಡ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಪರಿಣಾಮ ವಾಹನದ ಮುಂಭಾಗ ತೀವೃ ಜಖಂಗೊಂಡು ಚಾಲಕನ ಸೀಟ್ನಲ್ಲಿ ಶ್ರೀಕಾಂತ ಸಿಲುಕಿಕೊಂಡು ಗಂಭೀರವಾಗಿ ಗಾಯ ಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





