ಕಾಂಗ್ರೆಸ್ನಿಂದ ಮಹಿಳೆಯರ ಸಮಾನ ಹಕ್ಕಿನ ಅವಕಾಶ ತಪ್ಪಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಉಡುಪಿ: ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆಯಾಗಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಅವಕಾಶ ತಪ್ಪಿಹೋಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳದೆ ವಿರೋಧಿಸುತ್ತಿದೆ. ಈ ಬಾರಿಯ ಜನಗಣತಿಯನ್ನು ಪರಿಗಣಿಸಿದರೆ ಮಹಿಳಾ ಮೀಸಲಾತಿ 2034ರಲ್ಲಿ ಜಾರಿಯಾಗುವ ಸಂಭವವಿದೆ. ಹೀಗಾಗಿ 2011ರ ಜನಗಣತಿ ಪರಿಗಣಿಸಲಾಗಿದೆ. ಪ್ರಸ್ತುತ ದೇಶದಲ್ಲಿ 1973ರಲ್ಲಿ ಜಾರಿಗೆ ಬಂದಿರುವ ಲೋಕಸಭಾ ಸ್ಥಾನಗಳಿದ್ದು, ಅಂದಿನ ಜನಸಂಖ್ಯೆ 55 ಕೋಟಿಯಾಗಿತ್ತು. ಪ್ರಸ್ತುತ ಇದಕ್ಕಿಂತ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ ಅನಿವಾರ್ಯವಾಗಿದೆ ಎಂದರು.
ಮಸೂದೆ ಜಾರಿಗೆ ಚುನಾವಣೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆ ಜಾರಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಜಿಪಂ ಮಾಜಿ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಪ್ರಮುಖರಾದ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಪ್ರಿಯದರ್ಶಿನಿ, ಅನಿತಾ ಉಪಸ್ಥಿತರಿದ್ದರು.




