ಆರೋಗ್ಯವರ್ಧಕ ಸಿರಿಧಾನ್ಯಗಳ ಆಹಾರ ಸೇವನೆ ಉತ್ತೇಜಿಸಿ: ಡಾ.ಕೆ. ವಿದ್ಯಾಕುಮಾರಿ
ಉಡುಪಿಯಲ್ಲಿ ಸಿರಿಧಾನ್ಯಗಳ ಪಾಕ ಸ್ಪರ್ಧೆ

ಉಡುಪಿ: ಆರೋಗ್ಯವರ್ಧಕವೆನಿಸಿರುವ ಸಿರಿಧಾನ್ಯಗಳನ್ನು ಜನರು ತಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಬಳಕೆಮಾಡಿದಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲರೂ ಸಿರಿಧಾನ್ಯಗಳ ಆಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕರೆ ನೀಡಿದ್ದಾರೆ.
ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025ರ ಅಂಗವಾಗಿ ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪೂರ್ವಜರು ಪಾರಂಪರಿಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಾವಯವ ಗೊಬ್ಬರವನ್ನು ಬಳಸಿ ಅಲ್ಪಪ್ರಮಾಣದ ನೀರಿನ ಬಳಕೆಯೊಂದಿಗೆ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಇವುಗಳಲ್ಲಿ ಪೌಷ್ಠಿಕತೆಯ ಸತ್ವಗಳು ಸಹ ಹೆಚ್ಚು ಇರುತ್ತವೆ. ಹೀಗಾಗಿ ಜನಸಾಮಾನ್ಯರು ಪ್ರತಿನಿತ್ಯದ ಆಹಾರ ಪದಾರ್ಥಗಳಲ್ಲಿ ಇವುಗಳನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡುವುದು ಒಳ್ಳೆಯದು ಎಂದರು.
ಗೋಧಿ, ಮೈದಾದ ಬಳಕೆಯನ್ನು ಕಡಿಮೆ ಮಾಡಿ ಸಿರಿಧಾನ್ಯಗಳನ್ನು ಹೆಚ್ಚು ಬಳಕೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಮ್ಮ ನೆಲದ ಬೆಳೆಯಾದ ಸಿರಿಧಾನ್ಯಗಳು ನಮ್ಮ ಆಹಾರ ಪದ್ಧತಿಯಲ್ಲೂ ಇವೆ. ಆದರೆ ಇಂದು ಜನತೆ ಅದರಿಂದ ವಿಮುಖರಾಗಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮತ್ತೆ ಸಿರಿಧಾನ್ಯಗಳನ್ನು ಬಳಸುವುದು ಉತ್ತಮ ಎಂದರು.
ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಳಕೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಸಿರಿಧಾನ್ಯಗಳ ಸ್ಪರ್ಧೆ ಹಾಗೂ ಸಿರಿಧಾನ್ಯಗಳ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಮ್ಮ ನೆಲದ ಬೆಳೆಗಳ ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ಸಿರಿಧಾನ್ಯ ಕೃಷಿಕರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಸಿರಿಧಾನ್ಯಗಳು ನಮ್ಮ ಪೂರ್ವಜರ ಜೀವನದ ಆಹಾರ ಪದ್ಧತಿಗಳಾಗಿದ್ದವು. ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ಉದಲು ಹಾಗೂ ಜೋಳ ಇವು 9 ನಮ್ಮ ಸಾಂಪ್ರದಾಯಿಕ ಸಿರಿಧಾನ್ಯ ಬೆಳೆಗಳಾಗಿದ್ದು, ನಮ್ಮ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿದ್ದವು. ಆಧುನಿಕತೆಗೆ ಮಾರು ಹೋಗಿ ಇವುಗಳ ಉತ್ಪಾದನೆಗೆ ಹಿನ್ನೆಡೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಇವುಗಳ ಮಹತ್ವ ಅರಿತು ಜನರು ಬಳಕೆಗೆ ಹೆಚ್ಚಿನ ಆಸಕ್ತಿ ತೋರತೊಡಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್ ಮಾತನಾಡಿ, ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಆಹಾರ ಪದ್ದತಿಯಲ್ಲಿಯೂ ಬದಲಾವಣೆ ಕಂಡುಬರುವುದರಿಂದ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ತೀರಾ ಇಳಿಕೆಯಾಗಿದೆ. ಪ್ರತಿಯೊಬ್ಬರು ಸಿರಿಧಾನ್ಯಗಳಿಂದ ದೊರೆಯುವ ಪೌಷ್ಠಿಕಾಂಶಗಳ ಕುರಿತು ಮಾಹಿತಿ ಹೊಂದಿ ಅವುಗಳನ್ನು ಬಳಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ. ಸ್ವಾಗತಿಸಿದರೆ, ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸ್ಪರ್ಧೆಗೆ 31 ಮಂದಿ: ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 31 ಮಂದಿ ಮಹಿಳೆಯರು ಹಾಗೂ ಪುರುಷರು ತಾವು ತಯಾರಿಸಿ ತಂದ 58 ವಿವಿಧ ಬಗೆಯ ಬಗೆಬಗೆಯ ಖಾದ್ಯಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ ನಡೆದಿದ್ದು, ಖಾರ ಸಿರಿಧಾನ್ಯ ಖಾದ್ಯಗಳು, ಸಿಹಿ ಸಿರಿಧಾನ್ಯ ಖಾದ್ಯಗಳು ಮತ್ತು ಮರೆತುಹೋದ ಖಾದ್ಯಗಳು ವಿಭಾಗದಲ್ಲಿ ತಲಾ ಮೂರರಂತೆ ಒಟ್ಟು 9 ಮಂದಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರತಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದವರು ಜನವರಿ ಮೊದಲ ವಾರ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತಮ್ಮ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಬೇಕಿದೆ.
ಇಂದು ಭಾಗವಹಿಸಿದವರು ಸಿರಿಧಾನ್ಯಗಳಲ್ಲಿ ತಯಾರಿಸಿದ ಕುಚ್ಚಲಕ್ಕಿ ಲಡ್ಡು, ಊದಲು ಪಾಯಸ, ರಾಗಿ ಹಲ್ವಾ, ಗೋಧಿ ಮೋದಕ, ಸಜ್ಜೆಉಂಡೆ, ನವಣೆ ಚಿತ್ರಾನ್ನ, ಸಿರಿಧಾನ್ಯ ಪಲಾವ್, ದಾಸವಾಳ ಜ್ಯೂಸ್, ಅಗಸೆ ಮಜ್ಜಿಗೆ, ಬಾಳೆದಿಂಡು ಮೊಸರು ಬಜ್ಜಿ, ಅತ್ರಾಸ್, ಚಕ್ಕುಲಿ ಸೇರಿದಂತೆ 58 ವಿವಿಧ ಬಗೆಯ ಸಿರಿಧಾನ್ಯಗಳ ಖಾದ್ಯಗಳನ್ನು ಸ್ಪರ್ಧೆಗಾಗಿ ತಯಾರಿಸಿ ತಂದಿದ್ದರು.







