ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಆಗ್ರಹಿಸಿ ಸಿಪಿಎಂ ಧರಣಿ

ಬ್ರಹ್ಮಾವರ, ಡಿ.9: ಬೆಳಗಾವಿ ಅಧಿವೇಶನದಲ್ಲಿ ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಜಿಲ್ಲೆಯ ಶಾಸಕರು ಮುಂದಾಗಬೇಕು ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.
ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ನಡೆದ ಈ ಕುರಿತ ಪ್ರಚಾರಾಂದೋಲನಾದಲ್ಲಿ ಅವರು ಮಾತನಾಡುತ್ತಿದ್ದರು. ಬ್ರಹ್ಮಾವರ ಇಎಸ್ಐ ಆಸ್ಪತ್ರೆ ಮಂಜೂರಾಗಿ ವರ್ಷಗಳೇ ಕಳೆದರೂ, ಕಾಮಗಾರಿ ಆರಂಭಿಸಲು ಮುತುವರ್ಜಿ ವಹಿಸದೇ ಇರುವುದರಿಂದ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ತೊಂದರೆಯಾಗಿದೆ. ಆದುದರಿಂದ ಇದರ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಅವರು ದೂರಿದರು.
ಉಡುಪಿ ಸಿಪಿಎಂ ವಲಯ ಸಮಿತಿ ಕಾರ್ಯದರ್ಶಿ ಶಶಿರ್ಧ ಗೊಲ್ಲ ಮಾತನಾಡಿ, ಬ್ರಹ್ಮಾವರ ತಾಲೂಕು ರಚನೆ ಆಗಿದ್ದರೂ, ತಾಲೂಕು ಅಭಿವೃದ್ಧಿ ಕುಂಠಿತಗೊಂಡಿದೆ. ತಾಲೂಕು ಜನರ ಸಮಸ್ಯೆಗಳು ಬೆಳೆಯುತ್ತಿವೆ. ತಾಲೂಕು ಆಡಳಿತ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತ ಮನವಿಯನ್ನು ಬ್ರಹ್ಮಾವರ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಸುಭಾಶ್ಚಂದ್ರ ನಾಯಕ್, ಕವಿರಾಜ್ ಎಸ್.ಕಾಂಚನ್, ಬ್ರಹ್ಮಾವರ ಶಾಖಾ ಕಾರ್ಯದರ್ಶಿ ರಮೇಶ್ ಪೂಜಾರಿ, ಪ್ರಮುಖರಾದ ಮುರುಳಿ, ನಳಿನಿ, ಅರವಿಂದ, ಶ್ರೀಧರ ಶೆಟ್ಟಿ, ಕೃಷ್ಣ್ಣಾನಂದ ನಾಯಕ್, ಕರುಣಾಕರ, ವೆಂಕಟೇಶ್, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ :
ಬ್ರಹ್ಮಾವರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸರಕಾರಿ ಆಸ್ಪತ್ರೆಯಾಗಿ ಮಾಡಬೇಕು. ಬ್ರಹ್ಮಾವರದ ಮಟಪಾಡಿ, ನೀಲಾವರ ಮಾರ್ಗದಲ್ಲಿ ಸರಕಾರಿ ಬಸ್ಸು ಓಡಿಸಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಸಿಗುವಂತೆ ಮಾಡಬೇಕು. ಬ್ರಹ್ಮಾವರದಲ್ಲಿ ಪ್ಲೇಓವರ್ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು.
ಹಂದಾಡಿ, ಮಟಪಾಡಿಗಳಲ್ಲಿ ಮಳೆಗಾಲದಲ್ಲಿ ಕೃಷಿಗಳು ಮಳೆಯಿಂದ ಹಾನಿಗೊಳಗಾಗುವುದನ್ನು ತಪ್ಪಿಸಲು ಸರಿಯಾದ ಚರಂಡಿಗಳನ್ನು ಸಂಕಗಳನ್ನು ಮಾಡಬೇಕು. ಬ್ರಹ್ಮಾವರ ಬಸ್ ನಿಲ್ದಾಣ ವಿಸ್ತಾರವಾಗಿ ಸರಕಾರಿ ಜಾಗದಲ್ಲಿ ಮಾಡಲು ಕ್ರಮ ವಹಿಸಬೇಕು. ಬ್ರಹ್ಮಾವರದಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಂಜೂರು ಮಾಡಿ ಖಾಯಂ ನಿರೀಕ್ಷಕರನ್ನು ನೇಮಕ ಮಾಡಬೇಕು.
ಬ್ರಹ್ಮಾವರ ಕ್ರಷಿ ಕಾಲೇಜು ಮೇಲ್ದರ್ಜೆಗೇರಿಸಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಕೊಳಲಗಿರಿಯಲ್ಲಿ ಜನರ ರಕ್ಷಣೆಗೆ ಗ್ರಾಮಾಂತರ ಪೋಲೀಸ್ ಠಾಣೆ ಸ್ಥಾಪಿಸಬೇಕು. ಬೆಂಗಳೂರಿಗೆ ಮತ್ತೊಂದು ರಾತ್ರಿ ರೈಲು ಓಡಿಸಬೇಕು. ಬಾರಕೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ ಮಾಡಬೇಕು. ಹಂದಾಡಿ, ಮಟಪಾಡಿ, ನೀಲಾವರ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೂ ರುದ್ರ ಭೂಮಿ ಮಾಡಬೇಕು.







