ಕೊರಗ ಯುವಜನರ ಧರಣಿಗೆ ಸಿಪಿಎಂ ಬೆಂಬಲ

ಮಣಿಪಾಲ, ಡಿ.24: ಕೊರಗ ಯುವಜನರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಇಂದು ಭಾಗವಹಿಸಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹಾಗೂ ವೆಂಕಟೇಶ್ ಕೋಣಿ ಕೊರಗರ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕಳೆದ ಹತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರಕಾರ ದಿಂದ ಯಾವುದೇ ಸ್ಪಂದನೆ ಇಲ್ಲದಿರು ವುದು ಖಂಡನೀಯ ಎಂದು ಅವರು ಹೇಳಿದರು.
ಕಳೆದ ಹಲವು ವರ್ಷಗಳಿಂದ ಕೊರಗರ ಕುಂದುಕೊರತೆ ಸಭೆಗಳನ್ನು ನಡೆಸದಿರುವುದರ ಕುರಿತು ಕೊರಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತದ ಈ ಧೋರಣೆ ಖಂಡನೀಯ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಸಮುದಾಯವನ್ನು ಸರಕಾರವೂ ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯ ಸರಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ ಸರಕಾರದ ಜೊತೆಗೆ ಮಾತುಕತೆಗೆ ಏರ್ಪಾಟು ಮಾಡಬೇಕು ಎಂದು ಸುರೇಶ್ ಕಲ್ಲಾಗರ ಮತ್ತು ವೆಂಕಟೇಶ ಕೋಣಿ ಆಗ್ರಹಿಸಿದರು.







