ದಲಿತರು ಶಾಸನಗಳನ್ನು ಜಾರಿ ಮಾಡುವ ರಾಜಕೀಯ ಶಕ್ತಿಯಾಗಬೇಕು: ಜಯನ್ ಮಲ್ಪೆ

ಉಡುಪಿ: ಒಕ್ಕೂಟದ ವ್ಯವಸ್ಥೆಯಲ್ಲಿ ಹೋರಾಟ, ಚಳವಳಿ ಎಲ್ಲಾ ಮಾಡಿರುವ ಅಂಬೇಡ್ಕರ್ ಈಗ ನಮಗೆ ಸಂವಿಧಾನದ ಮೂಲಕ ಬೇಕಾಗಿರುವುದನ್ನು ಪಡೆಯುವ ಅವಕಾಶ ನೀಡಿದ್ದಾರೆ. ದಲಿತರು ಶಾಸನಗಳನ್ನು ಜಾರಿ ಮಾಡುವ ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸುವ ರಾಜಕೀಯ ಶಕ್ತಿಯಾಗಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರವಿವಾರ ಕುಂದಾಪುರದ ಹಳ್ಳಿಹೊಳೆಯಲ್ಲಿ ಆಯೋಜಿಸಲಾದ ಭೀಮ ಶಕ್ತಿ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್ ಮಾತನಾಡಿ, ಅಂಬೇಡ್ಕರ್ ಒಬ್ಬ ವಿಶ್ವಮಾನವನಾಗಿ ಈ ದೇಶಕ್ಕೆ ಕೊಡಮಾಡಿದ ಸಂವಿಧಾನ ಇವತ್ತು ಜಗತ್ತೇ ಕೊಂಡಾಡಿದೆ. ದಲಿತ ಮಳೆಯರು ತಮ್ಮ ಮಕ್ಕಳನ್ನು ವಿದ್ಯಾಭಾಸ ನೀಡಿ ಬೆಳಸಲು ಶ್ರಮಿಸಬೇಕು ಎಂದರು.
ಶಂಕರನಾರಾಯಣ ಪೋಲೀಸ್ ಉಪನಿರೀಕ್ಷಕ ಯೂನುಸ್ ಗಡ್ಡೆಕರ್ ಮಾತನಾಡಿ, ದಲಿತರು ಮೀಸಲಾತಿಯ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಗ್ರಾಪಂ ಮಾಜಿ ಅಧ್ಯಕ್ಷ ರಾಮ ನಾಯ್ಕ ಕೆರ್ಕಾಡು ವಹಿಸಿದ್ದರು. ದಸಂಸ ಜಿಲ್ಲಾ ನಾಯಕ ವಾಸುದೇವ ಮುದೂರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು. ದಲಿತ ಮುಖಂಡ ಪರಮೇಶ್ವರ ಉಪ್ಪೂರು, ಹಳ್ಳಿಹೊಳೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ದಸಂಸ ಜಿಲ್ಲಾ ನಾಯಕ ಚಂದ್ರ ಹಳಗೇರಿ, ಅಂಬೇಡ್ಕರ್ ಯುವಸೇನೆಯ ಗಣೇಶ್ ನೆರ್ಗಿ ಮಾತನಾಡಿದರು.
ಲಕ್ಷ್ಮಣ ಬೈಂದೂರು, ಹರೀಶ್ ಸಲ್ಯಾನ್ ಮಲ್ಪೆ, ಗಿರಿಜಾ ಹನ್ಕಿ, ಪ್ರಭಾಕರ ಉಳಾಲುಮಠ, ಭಾಸ್ಕರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕುಮಾರದಾಸ್ ಹಾಲಾಡಿ ಸ್ವಾಗತಿಸಿದರು. ಸುರೇಶ್ ಮೂಡುಬಗೆ ವಂದಿಸಿದರು. ಉದಯ ಹಳ್ಳಿಹೊಳೆ ಕಾರ್ಯಕ್ರಮ ನಿರೂಪಿಸಿದರು.







