ಆರ್ಥಿಕ ನೆರವಿಗಾಗಿ ಬರುವವರೊಂದಿಗೆ ಸೌಹಾರ್ದವಾಗಿ ವ್ಯವಹರಿಸಿ: ಉಡುಪಿ ಜಿಪಂ ಸಿಇಓ ಪ್ರತೀಕ್ ಬಾಯಲ್ ಬ್ಯಾಂಕ್ಗಳಿಗೆ ಸೂಚನೆ

ಉಡುಪಿ, ಸೆ.3: ರೈತರು ಕೃಷಿ ಸೇರಿದಂತೆ ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅಗತ್ಯವಿರುವ ಸಾಲ ಸೌಲಭ್ಯ ಗಳನ್ನು ಅರ್ಹರಿಗೆ ಸಮರ್ಪಕವಾಗಿ ಒದಗಿಸಿ, ಅವರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಪ್ರೋತ್ಸಾಹಿಸುವ ಕಾರ್ಯವನ್ನು ಬ್ಯಾಂಕುಗಳು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರದ ವಿವಿಧ ಯೋಜನೆಗಳಡಿ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ಕೋರಿ ಬ್ಯಾಂಕುಗಳಿಗೆ ಬರುವ ರೈತರು, ಸಾರ್ವಜನಿಕರು ಹಾಗೂ ಮಹಿಳಾ ಫಲಾನುಭವಿಗಳೊಂದಿಗೆ ಸೌಹಾರ್ದತವಾಗಿ ನಡೆದು ಕೊಳ್ಳುವುದರೊಂದಿಗೆ ಅವರುಗಳು ನೆರವು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದರು.
ಸೈಬರ್ ವಂಚನೆ ಬಗ್ಗೆ ಅರಿವು: ಹಣಕಾಸಿನ ವಂಚನೆಯನ್ನು ತಡೆಗಟ್ಟಲು ವಹಿವಾಟು ಉದ್ದೇಶಗಳಿಗಾಗಿ 1600 ಫೋನ್ ಸಂಖ್ಯೆ ಸರಣಿಯನ್ನು ಮಾತ್ರ ಬಳಸುವಂತೆ ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ. ಎಲ್ಲಾ ಬ್ಯಾಂಕುಗಳು ವಹಿವಾಟು-ಸಂಬಂಧಿತ ಕರೆಗಳಿಗೆ 1600ರಿಂದ ಪ್ರಾರಂಭ ವಾಗುವ ಫೋನ್ ಸಂಖ್ಯೆಗಳನ್ನು ಬಳಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಸೈಬರ್ನಿಂದ ವಂಚನೆಯಿಂದ ಹಣ ಕಳೆದುಕೊಂಡ ಗ್ರಾಹಕರು ಬ್ಯಾಂಕುಗಳಿಗೆ ವಿಚಾರಿಸಲು ಬಂದಾಗ ಅವರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವುದರೊಂದಿಗೆ ಸಲಹೆ ಸೇರಿದಂತೆ ಮತ್ತಿತರ ತಿಳುವಳಿಕೆಗಳನ್ನು ನೀಡಬೇಕು. ಸಾರ್ವಜನಿಕರು ಈ ರೀತಿಯ ವಂಚನೆಗೊಳಗಾದಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರುಗಳಿಗೆ ಅರಿವು ಮೂಡಿಸಬೇಕು. ನಿಯಮಾನುಸಾರ ಅವರುಗಳಿಗೆ ಪರಿಹಾರ ಒದಗಿಸಲು ಅವಕಾಶವಿದ್ದಲ್ಲಿ ಅವರಿಗೆ ನೀಡಬೇಕು. ಪೊಲೀಸರು ಪ್ರಕರಣ ಸಂಬಂಧ ತನಿಖೆಗೆ ಬಂದಾಗ ಅವರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.
ಠೇವಣಿ ಅನುಪಾತ ಇಳಿಕೆ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1ರ ರೀಜನಲ್ ಮ್ಯಾನೆಜರ್ ತದಿನಾಡ ಶ್ರೀನಾಗ ಪೂರ್ಣಾನಂದ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜೂನ್ ಮಾಹೆಯ ಅಂತ್ಯದವರೆಗೆ ಜಿಲ್ಲೆಯ ಒಟ್ಟು 440 ಶಾಖೆಗಳಲ್ಲಿ ಠೇವಣಿ 48715.93 ಕೋಟಿ ರೂ., ಮುಂಗಡ ಠೇವಣಿ 24,184.84 ಕೋಟಿ ಸೇರಿದಂತೆ ಒಟ್ಟು ಬ್ಯಾಂಕುಗಳಲ್ಲಿ 72,900.77 ಕೋಟಿ ರೂ. ವಹಿವಾಟು ನಡೆದಿದ್ದು, ಬ್ಯಾಂಕುಗಳ ಠೇವಣಿ ಅನುಪಾತ ಶೇ.49.64 ಇದೆ. ಈ ಪ್ರಮಾಣವು ರೀಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ ಎಂದರು.
ಜಿಲ್ಲೆಗೆ ಪ್ರಸಕ್ತ ಸಾಲಿಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯ ಗಳೆರಡಕ್ಕೂ ಒಟ್ಟಾರೆಯಾಗಿ 18,532.26 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ 7,302.87 ಕೋಟಿ ರೂ. ಗುರಿ ಸಾಧಿಸಿ, ಶೇ. 39.41 ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೃಷಿ ವಲಯದಲ್ಲಿ 4801.25 ಕೋಟಿ ನಿಗಧಿತ ಗುರಿಗೆ 1653.82 ಗುರಿ ಸಾಧಿಸಿ ಶೇ.34.45, ಎಂ.ಎಸ್.ಎಂ.ಇ ವಲಯಕ್ಕೆ 4192.82 ಕೋಟಿ ನಿಗಧಿತ ಗುರಿಗೆ 2158.61 ಗುರಿ ಸಾಧಿಸಿ ಶೇ. 51.48 ರಷ್ಟು, ಶಿಕ್ಷಣ ವಲಯದಲ್ಲಿ 231.82 ಕೋಟಿ ರೂ. ನಿಗಧಿತ ಗುರಿಗೆ 39.29 ಗುರಿ ಸಾಧಿಸಿ ಶೇ.16.95ರಷ್ಟು, ವಸತಿ ಕ್ಷೇತ್ರಗಳಿಗೆ 264.54 ಕೋಟಿ ರೂ. ನಿಗಧಿತ ಗುರಿಗೆ 69.64 ಗುರಿ ಸಾಧಿಸಿ ಶೇ. 26.32ರಷ್ಟು, ಇತರೆ ಕ್ಷೇತ್ರಗಳಿಗೆ 373.47 ಕೋಟಿ ರೂ. ನಿಗಧಿತ ಗುರಿಗೆ, 186.45 ಗುರಿ ಸಾಧಿಸಿ ಶೇ. 49.92 ಹಾಗೂ ಆದ್ಯತೇತರ ವಲಯಗಳಿಗೆ 8668.37 ಕೋಟಿ ರೂ. ನಿಗಧಿತ ಗುರಿಗೆ, 3195.06 ರಷ್ಟು ಗುರಿ ಸಾಧಿಸಿ ಶೇ. 36.86 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಆರ್ಬಿಐ ಎ.ಜಿ.ಎಂ. ನಿಶಾ ಠಾಕೂರ್, ಎಸ್ಸಿಡಿಸಿಸಿ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಾಜೇಶ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
‘ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸುಲಭವಾಗಿ ಶಿಕ್ಷಣ ಸಾಲ ನೀಡುವ ಯೋಜನೆಯಾಗಿದ್ದು, ಈ ಬಗ್ಗೆ ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡಿ, ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು’
-ಪ್ರತೀಕ್ ಬಾಯಾಲ್, ಸಿಇಓ ಜಿಪಂ ಉಡುಪಿ
ಸೈಬರ್ ವಂಚನೆ ಒಳಗಾದವರಿಗೆ ನಷ್ಟ ಪರಿಹಾರ
ಬ್ಯಾಂಕಿನ ಆಂತರಿಕ ನಿಯಮಗಳಿಗೆ ಅನುಗುಣವಾಗಿ ಸಣ್ಣ ಮೊತ್ತದ ವಂಚನಾತ್ಮಕ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವೈವಾಟುಗಳಿಂದ ವ್ಯಕ್ತಿಯ ನಷ್ಟವು ನಿಜವಾದದ್ದು ಎಂದು ಸಾಧಿಸಿದಲ್ಲಿ, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಅಥವಾ ರಾಷ್ಟ್ರೀಯ ಸೈಬ್ ಅಪರಾಧ ಸಹಾಯ ವಾಣಿನಲ್ಲಿ ನಿಗದಿತ ಅವಧಿಯಲ್ಲಿ ಪ್ರಕರಣ ದಾಖಲಿಸಿದ್ದಲ್ಲಿ, ನಿವ್ವಳ ನಷ್ಟದ ಮೊತ್ತದ ಶೇ.85ರಷ್ಟು ಅಥವಾ 25,000ರೂ.(ಯಾವುದು ಕಡಿಮೆಯೋ ಅದನ್ನು)ವನ್ನು ಅವರ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಪರಿಹಾರ ವಾಗಿ ನೀಡಲಾಗುವುದು. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಆರ್ಬಿಐ ಎ.ಜಿ.ಎಂ. ನಿಶಾ ಠಾಕೂರ್ ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಮಾತನಾಡಿ, ಕೇಂದ್ರ ಸರಕಾರದ ಪಿ.ಎಂ. ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಸೆ.1ರಿಂದ 30ರವರೆಗೆ ಆಯೋಜಿಸಲಾಗುವ ಲೋಕ್ ಕಲ್ಯಾಣ್ ಮೇಳ ವಿಶೇಷ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ಮೂಡಿಸುವುದರೊಂದಿಗೆ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಬ್ಯಾಂಕ್ಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಬ್ಯಾಂಕ್ನ ಅಧಿಕಾರಿಗಳು ಮುಂದಾಗಬೇಕು ಎಂದರು.






