ಎಐ ಯುಗದಲ್ಲಿ ತಮ್ಮ ಜವಾಬ್ದಾರಿಗಳನ್ನು ಮರೆಯಬೇಡಿ : ಪ್ರೊ.ಅನನ್ಯ ಮುಖರ್ಜಿ

ಮಣಿಪಾಲ, ನ.21: ಕೃತಕ ಬುದ್ಧಿಮತ್ತೆ (ಎಐ)ಯಿಂದ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದು ಹೊಸದಿಲ್ಲಿ ಎನ್ಸಿಆರ್ ನ ಶಿವನಾಡರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅನನ್ಯ ಮುಖರ್ಜಿ ವಿವಿಧ ಪದವಿ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಮಣಿಪಾಲ ಗ್ರೀನ್ಸ್ ನಲ್ಲಿ ನಡೆದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 33ನೇ ಘಟಿಕೋತ್ಸವದ ಮೊದಲ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಎಐ ತಂತ್ರಜ್ಞಾನವನ್ನು ವಿಶ್ಲೇಷಣೆ ಹಾಗೂ ದತ್ತಾಂಶ ಅನ್ವಯಿಸಲು ಮಾತ್ರ ಬಳಸಬೇಕು. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ನೀವೇ (ಮನುಷ್ಯ) ಕೈಗೊಳ್ಳಬೇಕು ಎಂದ ಪ್ರೊ.ಅನನ್ಯ ಮುಖರ್ಜಿ, ಅದರಿಂದಾಗುವ ನೈತಿಕ, ಸಾಮಾಜಿಕ ಹಾಗೂ ತಾಂತ್ರಿಕ ಸವಾಲುಗಳ ಕುರಿತೂ ಸಹ ನವ ಪದವೀಧರರಿಗೆ ಎಚ್ಚರಿಸಿದರು.
ಮೂರು ದಿನಗಳ ಕಾಲ ಮಾಹೆಯಲ್ಲಿ ನಡೆಯುವ ಘಟಿಕೋತ್ಸವದ ಮೊದಲ ದಿನದಂದು ಒಟ್ಟು 1,648 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು. ಇವರೊಂದಿಗೆ 64 ಮಂದಿ ಪಿಎಚ್ಡಿ ಪದವಿಗಳನ್ನೂ ಪಡೆದರು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ನಾಲ್ವರು ವಿದ್ಯಾರ್ಥಿಗಳಿಗೆ ಡಾ.ಟಿ.ಎಂ.ಎ.ಪೈ ಚಿನ್ನದ ಪದಕಗಳನ್ನು ವಿತರಿಸಲಾಯಿತು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಔಪಚಾರಿಕವಾಗಿ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಅವರು ಮಾಹೆಯ ವಿವಿದ ಸಾಧನೆಗಳನ್ನು ವಿವರಿಸಿದರು.
ಮಾಹೆಯ ಕುಲಾಧಿಪತಿ ಡಾ.ರಾಮದಾಸ್ ಪೈ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ರೂಪಿಸಲಾದ ಅಂಚೆಲಕೋಟೆಯನ್ನು ಮಾಹೆ ಟ್ರಸ್ಟ್ ನ ಟ್ರಸ್ಟಿಗಳಾದ ವಸಂತಿ ಆರ್.ಪೈ ಹಾಗೂ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಜಂಟಿಯಾಗಿ ಬಿಡುಗಡೆಗೊಳಿಸಿದರು.







