ಭಾರತದ ಸಾಂಪ್ರದಾಯಿಕ ಜ್ಞಾನದತ್ತ ವಿದೇಶಿಯರ ಗಮನ ಸೆಳೆಯಲು ಪ್ರಯತ್ನ: ಐಸಿಸಿಆರ್ ಅಧ್ಯಕ್ಷ ವಿನಯ ಸಹಸ್ರಬುದ್ಧೆ

ಉಡುಪಿ, ಅ.5: ಭಾರತದ ಭವ್ಯ ಇತಿಹಾಸ, ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಕುರಿತಂತೆ ವಿದೇಶಿಯರ, ವಿದೇಶಿ ವಿದ್ಯಾರ್ಥಿ ಗಳ, ಅನಿವಾಸಿ ಭಾರತೀಯರಂತೆ ‘ಭಾರತದಲ್ಲಿದ್ದು ಭಾರತೀಯರಲ್ಲದ’ ದವರ ಕುತೂಹಲ ಕೆರಳಿಸಿ, ಅಧ್ಯಯನಕ್ಕೆ ಪ್ರೇರೇಪಿಸಬೇಕಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್)ನ ಅಧ್ಯಕ್ಷ ಡಾ.ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಪುಣೆಯ ಸಾವಿತ್ರಿಬಾಯಿ ಫುಲೆ ಪುಣೆ ವಿವಿಯ ಸಹಯೋಗದೊಂದಿಗೆ ಐಸಿಸಿಆರ್ನ ‘ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಜಾಗತೀಕರಣ ’(ಯುಟಿಐಕೆಎಸ್) ಆನ್ಲೈನ್ ಪೋರ್ಟಲ್ನ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ಭಾರತದ 3000 ವರ್ಷಗಳ ಭವ್ಯ ಇತಿಹಾಸ, ಇಲ್ಲಿದ್ದ ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಭವ್ಯ ಪರಂಪರೆ ಯನ್ನು ಸವಿಸ್ತಾರವಾಗಿ ವಿವರಿಸಿದ ಸಹಸ್ರಬುದ್ಧೆ, 1946ರ ಬಳಿಕ ಎಲ್ಲವೂ ಬದಲಾದವು. ಮಕಾಲೆ ಮೂಲಕ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯೇ ಶ್ರೇಷ್ಠ ಎಂಬ ಭಾವನೆ ಒಂದು ವರ್ಗದಲ್ಲಿ ಮೂಡಿತು. ಇದನ್ನು ನಾವಿಂದು ಬದಲಿಸಬೇಕಿದೆ ಎಂದು ಅವರು ಹೇಳಿದರು.
ಇದೀಗ ಐಸಿಸಿಆರ್ ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಅದರ ಶ್ರೀಮಂತ ನಾಗರಿತೆ ಹಾಗೂ ಸಂಸ್ಕೃತಿ, ಜ್ಞಾನ ಸಂಪತ್ತನ್ನು ಜಗತ್ತಿಗೆ ಪರಿಚಯಿಸಲು ಯುಟಿಐಕೆಎಸ್ ಆನ್ಲೈನ್ ಪೋರ್ಟಲ್ ಮೂಲಕ ಪ್ರಯತ್ನ ಪ್ರಾರಂಭಿಸಿದೆ ಎಂದವರು ಹೇಳಿದರು.
ಯುಟಿಐಕೆಎಸ್ ಪೋರ್ಟಲ್ ಕುರಿತು ತಮ್ಮ ಪ್ರಾಸ್ತಾವಿಕ ಮಾತುಗಳನ್ನು ವಿವರಿಸಿದ ಐಸಿಸಿಆರ್ನ ಡಿಡಿಜಿ ಅಭಯ ಕುಮಾರ್ ಅವರು, ಈ ಆನ್ಲೈನ್ ಫ್ಲಾಟ್ಫಾರ್ಮ್ನ್ನು ಪುಣೆಯ ಸಾವಿತ್ರಿಬಾಯಿ ಪುಲೆ ಪುಣೆ ವಿವಿಯ ಸಹಯೋಗ ದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲ ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಅಡಿಯಲ್ಲಿ ಹಲವಾರು ವಿಷಯಗಳ ಪರಿಚಯಾತ್ಮಕ ಮಟ್ಟದ ಅಲ್ಪಾವಧಿ ಅಧ್ಯಯನ ಕೋರ್ಸ್ಗಳನ್ನು ಒದಗಿಸಲಾಗುತ್ತಿದೆ ಎಂದರು.
ಪೋರ್ಟಲ್ ಭಾರತೀಯ ಸಂಸ್ಕೃತಿಯ ಕುರಿತಂತೆ ಅಧಿಕೃತವಾದ ಜ್ಞಾನ ಹಾಗೂ ಮಾಹಿತಿಗಳನ್ನು ಒದಗಿಸುವ ಗುರಿ ಯನ್ನು ಹೊಂದಿದೆ. ಭಾರತೀಯ ಸಂಸ್ಕೃತಿ, ಕಲೆಯ ಕುರಿತಂತೆ ಆಳವಾದ ಜ್ಞಾನವನ್ನು ಬಯಸುವವರಿಗೂ ಸೂಕ್ಷ್ಮವಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂದರು.
ಯುಟಿಐಕೆಎಸ್ ದೂರಶಿಕ್ಷಣ ಕ್ರಮದಲ್ಲಿ ಆನ್ಲೈನ್ ಕೋರ್ಸ್ಗಳಿಗೆ ಸಮಗ್ರ ವೇದಿಕೆಯನ್ನು ಒದಗಿಸುತ್ತದೆ. ಇದನ್ನು ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ಗಳ ಮೂಲಕ ವಿವಿಧ ಸಾಧನಗಳಲ್ಲಿ ಬಳಸಬ ಹುದು.ಇದು ಕೇವಲ ವಿದೇಶಿಯರಿಗೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಆಳ, ಶ್ರೀಮಂತಿಕೆಯನ್ನು ಅರಿಯದ ಭಾರತೀಯ ರಿಗೂ ಉಪಯುಕ್ತವಾಗಿದೆ ಎಂದು ವಿವರಿಸಿದರು.
ಇಂದು ಭಾರತದ ವಾಸ್ತುಶಿಲ್ಪ, ಭಾರತದಲ್ಲಿ ಪಾಕಶಾಸ್ತ್ರ, ಭಾರತೀಯ ಉಡುಪುಗಳು, ಭಾರತೀಯ ಚಿತ್ರರಂಗದ ಪರಿಚಯ ಹಾಗೂ ರಾಮಾಯಣ ಮತ್ತು ಮಹಾಭಾರತ ಎಂಬ ಐದು ಸಂಚಿಕೆಗಳನ್ನು ಇಂದು ಅಳವಡಿಸಲಾಗಿದೆ. ಇನ್ನು ವೈವಿಧ್ಯಮಯ ಏಳು ವಿಷಯಗಳ ಮೇಲಿನ ಸಂಚಿಕೆಗಳು ತಯಾರಿಯ ವಿವಿಧ ಹಂತದಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ಐಇಸಿಆರ್ನ ಮಹಾನಿರ್ದೇಶಕ ಕುಮಾರ್ ತುಹಿನ್, ಮಾಹೆ ವಿವಿಯ ಡಾ.ಗಿರಿಧರ ಕಿಣಿ, ಎಂಇಎಂಜಿಯ ಉಪಾಧ್ಯಕ್ಷ ಸೋಮನಾಥ ದಾಸ್ ಉಪಸ್ಥಿತರಿದ್ದರು. ಮಾಹೆಯ ಪ್ರೊವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಕುಮಾರ್ ತುಹಿನ್ ವಂದಿಸಿದರು. ಡಾ.ಸಂವಿಧ್ ದಾಸ್ ಕಾರ್ಯಕ್ರಮ ನಿರೂಪಿಸಿದರು.







