ಉಡುಪಿ ನಗರದ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ದುರಂತ: ಹಲವು ಅಂಗಡಿಗಳು ಬೆಂಕಿಗೆ ಆಹುತಿ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ಇಂದು ಸಂಜೆ ವೇಳೆ ಬೆಂಕಿ ದುರಂತ ಸಂಭವಿಸಿದ್ದು, ಇದರಿಂದ ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಕಟ್ಟಡದಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಈ ಬೆಂಕಿ ಕಟ್ಟಡದ ಹಲವು ಅಂಗಡಿಗಳಿಗೆ ವಿಸ್ತರಿಸಿದ್ದು, ಇಲ್ಲಿನ ಎಲ್ಲ ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಮೊಬೈಲ್, ಹಾರ್ಡ್ವೇರ್, ಪ್ಲಾಸ್ಟಿಕ್ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಮೂರು ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿತು. ಆದರೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಬಳಿಕ ಟ್ಯಾಂಕರ್ ಮೂಲಕ ನೀರು ತರಿಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಸುಮಾರು ಎರಡು ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ಬೆಂಕಿ ನಿಯಂತ್ರಣಕ್ಕೆ ತರಲಾಯಿತು. ಆದರೆ ಇನ್ನೂ ಸಂಪೂರ್ಣ ನಂದಿಸಲು ಆಗಿಲ್ಲ ಎಂದು ತಿಳಿದುಬಂದಿದೆ.
ಬೆಂಕಿ ನಂದಿಸುವಲ್ಲಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಸೇರಿದಂತೆ ಸ್ಥಳೀಯರು ಸಹಕಾರ ನೀಡಿದ್ದು, ದುರಂತ ಸಂಭವಿಸಿದ 45 ನಿಮಿಷಗಳ ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ವಿರುದ್ಧ ಅಂಗಡಿಗಳ ಮಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.






