ಸಮಾಜಮುಖಿ ಚಿಂತನೆಗೆ ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಇರಬೇಕು: ಸಿಎಂ ಸಿದ್ದರಾಮಯ್ಯ

ಕಾರ್ಕಳ, ಫೆ.25: ಶಿಕ್ಷಣದಿಂದ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಬೆಳೆಯಬೇಕು. ಇದರಿಂದ ವಿವೇಕ ಹಾಗೂ ಜ್ಞಾನ ಬೆಳೆಯುತ್ತದೆ. ಈ ಮೂಲಕ ಸಮಾಜಮುಖಿ ಚಿಂತನೆ ಸಾಧ್ಯವಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಕಾರ್ಕಳದ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ಅದು ಕುಕ್ಕುಂದೂರಿನಲ್ಲಿ ನಡೆಸುತ್ತಿರುವ ಮಹಾತ್ಮ ಗಾಂಧಿ ವಸತಿ ಪ್ರೌಢ ಶಾಲೆಯ 35ನೇ ವಾರ್ಷಿಕೋತ್ಸವ ಹಾಗೂ ಶಾಲೆಗೆ ಸಂಬಂಧಿಸಿದ ‘ಕಿಸಾನ್ ಸಭಾ ಸಭಾಂಗಣ’ ವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಬಳಿಕ ನಿಟ್ಟೆ ವಿನಯ ಹೆಗ್ಡೆ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಇಲ್ಲದಿದ್ದರೆ ಸಮಾಜಮುಖಿ ಚಿಂತನೆ ಬೆಳೆಯಲು ಸಾಧ್ಯವಿಲ್ಲ. ಇದರಿಂದ ಸಮಾಜದಲ್ಲಿ ಕಂದಾಚಾರ ಹಾಗೂ ಮೌಡ್ಯಗಳು ಬೆಳೆಯುತ್ತವೆ ಎಂದ ಸಿದ್ಧರಾಮಯ್ಯ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಾವು ಪಡೆವ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಎಲ್ಲಿಯವರೆಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಎಲ್ಲರಿಗೂ ಲಭ್ಯವಾಗುವುದಿಲ್ಲವೊ ಅಲ್ಲಿಯವರೆಗೆ ರಾಜಕೀಯ ಸ್ವಾತಂತ್ರ್ಯವೂ ಸಮಾನತೆಯೂ ಸಿಗುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದಾಗ ಮಾತ್ರ ಸಮಸಮಾಜ ಸಾಧ್ಯವಾಗುತ್ತದೆ. ಸಮಾನ ಅವಕಾಶ ಎಲ್ಲರಿಗೂ ಸಿಗಬೇಕೆಂದೇ ಭಾಗ್ಯ, ಗ್ಯಾರಂಟಿ ಯೋಜನೆ ಗಳನ್ನು ಜಾರಿಗೆ ತರಲಾಗಿದೆ ಎಂದವರು ನುಡಿದರು.
ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕತೆ ಹುಡುಕಬೇಕಿದೆ. ಶಿಕ್ಷಣ, ಸಮಾನ ಆವಕಾಶ ಎಲ್ಲರಿಗೂ ಸಿಗಬೇಕು. ದೇಶದಲ್ಲಿ ಅಧಿಕಾರ, ಸಂಪತ್ತು ಹಂಚಿಕೆ ಆಗಬೇಕು. ಅಕ್ಷರ ಸಂಸ್ಕೃತಿಯಿಂದ ಜನರು ವಂಚಿತರಾಗಲು ಜಾತಿ, ಅಸಮಾನ ವ್ಯವಸ್ಥೆ ಕಾರಣ ಎಂದು ನುಡಿದರು.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮಕ್ಕಳ ಶಿಕ್ಷಣ, ಪೌಷ್ಟಿಕತೆ, ರೋಗ ನಿರೋಧಕ ವ್ಯವಸ್ಥೆಗೆ ಸರಕಾರ ಒತ್ತು ನೀಡಿದೆ. ಮಕ್ಕಳು ಪ್ರಪಂಚದ ಜ್ಞಾನ ಶಕ್ತಿಯಾಗಲು ಅವಕಾಶ ಬೇಕು ಎಂದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ.ಮಹದೇವಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿದರು.
ಸನ್ಮಾನ: ಸಿದ್ದರಾಮಯ್ಯ ಅವರನ್ನು ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಸನ್ಮಾನಿಸಿದರು. ಶೈಕ್ಷಣಿಕ ಸಲಹೆಗಾರ ಎಂ.ಸಿ. ಅಚಾರ, ಮುಖ್ಯೋಪಾಧ್ಯಾಯ ಸಂಜೀವ ಪೂಜಾರಿ ಎಂ., ಹಿರಿಯ ಅಧ್ಯಾಪಕಿ ನಿರ್ಮಲಾವತಿ, ನಿರ್ಮಿತಿ ಕೇಂದ್ರದ ವಾಸ್ತು ವಿನ್ಯಾಸಗಾರ ಪವನ್, ನರಸಿಂಹ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ, ಬಿ.ರಮಾನಾಥ್ ರೈ, ಸಹಕಾರಿ ಧುರೀಣ ಡಾ. ಎಂ.ಎನ್.ರಾಜೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ನಿಟ್ಟೆ ವಿವಿಯ ಯೋಗೀಶ್ ಹೆಗ್ಡೆ, ಬೋಳಾಸ್ ಸಂಸ್ಥೆಯ ದಾಮೋದರ ಕಾಮತ್, ಎಂಸಿಎಸ್ ಸಂಸ್ಥೆಯ ಸಿಇಓ ಚಂದ್ರಶೇಖರ್, ಕೃಷ್ಣಮೂರ್ತಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಮುಖ್ಯಮಂತ್ರಿ ಹಾಗೂ ಕಿಸಾನ್ ಸಭಾ ಟ್ರಸ್ಟ್ನ ಸ್ಥಾಪಕ ಡಾ.ಎಂ.ವೀರಪ್ಪ ಮೊಯ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್ನ ಸ್ಥಾಪನೆ, ಇದರ ಮೂಲಕ ಭೂಸುಧಾರಣಾ ಕಾನೂನಿನ ಯಶಸ್ಸಿಗೆ ನಡೆಸಿದ ಹೋರಾಟದ ಕುರಿತು ನೆನಪಿನ ಬುತ್ತಿಯನ್ನು ತೆರೆದಿಟ್ಟರು.
ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ ಸ್ವಾಗತಿಸಿದರು. ಉದಯ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಬಿ.ಕೃಷ್ಣಮೂರ್ತಿ ವಂದಿಸಿದರು.
ನುಡಿದಂತೆ ನಡೆಯುವ ಸರಕಾರ
ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರ ಎಂದು ನಾನು ಯಾವತ್ತೂ ಹೇಳುತ್ತೇನೆ. ಅದನ್ನು ಈ ಬಾರಿಯೂ ಸಾಧಿಸಿ ತೋರಿಸುತ್ತೇವೆ. 2013ರಿಂದ 2018ರಲ್ಲಿ ನನ್ನ ನೇತೃತ್ವದ ಸರಕಾರ ನೀಡಿದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದ್ದೇವೆ. 2023ರಲ್ಲಿ ನಾವು ನೀಡಿದ 590 ಭರವಸೆಗಳ ಪೈಕಿ ಕಳೆದ ಎರಡು ವರ್ಷ 9 ತಿಂಗಳ ಅವಧಿಯಲ್ಲಿ 243 ಭರವಸೆ ಈಡೇರಿದೆ. ಇನ್ನುಳಿದ ಅವಧಿಯಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದು ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗೆ ಪ್ರತಿ ವರ್ಷ 52,000ಕೋಟಿ ರೂ. ವ್ಯಯಿಸಲಾಗು ತ್ತಿದೆ. ಜಾತಿ, ಧರ್ಮಾತೀತವಾಗಿ ಗ್ಯಾರಂಟಿ ಯೋಜನೆ ಲಾಭ ರಾಜ್ಯದ ಸಮಸ್ತ ಜನರಿಗೂ ಸಿಗುತ್ತಿದೆ. ಗ್ಯಾರಂಟಿ ಯೋಜನೆಯಲ್ಲಿ ಕಳೆದೆರಡು ಎರಡು ವರ್ಷಗಳಲ್ಲಿ 1.20ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ರಾಜ್ಯದ ಅಭಿವೃದ್ಧಿಗೂ ಅನುದಾನ ನೀಡಲಾಗುತ್ತಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.






