UDUPI | ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಪ್ರಕರಣ: ವ್ಯವಸ್ಥಾಪಕನ ಬಂಧನ

ಸುರೇಶ ಭಟ್(38) ಬಂಧಿತ ಆರೋಪಿ
ಕೋಟ : ಸಾಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಂತರ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ನಿವಾಸಿ ಸುರೇಶ ಭಟ್(38) ಬಂಧಿತ ಆರೋಪಿ. ಸುರೇಶ್ ಭಟ್ ಹಾಗೂ ಶಾಖೆಯ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಎಂಬವರು ಸಂಘಕ್ಕೆ 1.70ಕೋಟಿ ರೂ. ಹಣ ವಂಚಿಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ ಕುಮಾರ್ ಹಾಗೂ ಮಾಂತೇಶ್ ಜಾಭಗೌಡ ಮತ್ತು ಸಿಬ್ಬಂದಿ ಕೃಷ್ಣ ಶೇರೆಗಾರ, ಶ್ರೀಧರ್, ವಿಜಯೇಂದ್ರ ತಂಡ ಆರೋಪಿಯನ್ನು ಬಂಧಿಸಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.





