ಜನರ ಹಕ್ಕನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ: ಡಾ.ಎಚ್.ವಿ.ವಾಸು

ಉಡುಪಿ: ತಮಿಳುನಾಡಿನಲ್ಲಿ ಸರಕಾರ ಅತಿ ಹೆಚ್ಚು ಮಹಿಳೆಯರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅಲ್ಲಿಯ ಜನರು ಎಷ್ಟು ಮಂದಿ ಸೋಮಾರಿಗಳಾಗಿದ್ದಾರೆ? ಉಚಿತ ಯೋಜನೆಗಳನ್ನು ನೀಡುವುದರಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು. ಅದೇ ರೀತಿ ದೇಶ ದಿವಾಳಿ ಆಗುತ್ತದೆ ಎಂಬುದು ಕೂಡ ಸುಳ್ಳು. ಇಂತಹ ಸುಳ್ಳುಗಳನ್ನು ವ್ಯವಸ್ಥಿತ ವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಈದಿನ ಡಾಟ್ ಕಾಮ್ನ ಮುಖ್ಯಸ್ಥ ಡಾ.ಎಚ್.ವಿ.ವಾಸು ಹೇಳಿದ್ದಾರೆ.
ಸಹಬಾಳ್ವೆ ಉಡುಪಿ ಮತ್ತು ಈದಿನ ಸಹಯೋಗದೊಂದಿಗೆ ಇಂದು ನಡೆದ ಜನರ ಹಕ್ಕುನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಈಗಾಗಲೇ ರಾಜ್ಯ ಕಾಂಗ್ರೆಸ್ ಸರಕಾರ ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರ ಬೆನ್ನಿಗೆ ವಿರೋಧ ಪಕ್ಷಗಳು ಉಚಿತ ಯೋಜನೆಗಳಿಂದ ದೇಶ ದಿವಾಳಿ ಆಗುತ್ತದೆ ಎಂದು ಹೇಳುತ್ತಿದೆ. ಆದರೆ ರಾಜ್ಯ ಸರಕಾರದ ಉಚಿತ ಯೋಜನೆಗಳಿಂದ ನಿಜವಾಗಿಯೂ ದೇಶ ದಿವಾಳಿ ಆಗುತ್ತದೆ ಎಂಬು ದನ್ನು ತಿಳಿಯಲು ಅರ್ಥಶಾಸ್ತ್ರರು ಏನು ಈ ಉಚಿತ ಯೋಜನೆಗಳ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದ ನಂತರ ಅದರ ಬಗ್ಗೆ ಮಾತನಾಡಬೇಕೆ ಹೊರತು ವಾಟ್ಸಪ್ ನಲ್ಲಿ ಬಂದ ಸುಳ್ಳು ಸುದ್ದಿಗಳಿಂದಲ್ಲ ಎಂದರು.
ಸಹಬಾಳ್ವೆ ಸಂಚಾಲಕ ಪ್ರಶಾಂತ್ ಜತ್ತನ್ನ ಮಾತನಾಡಿ, ಸರಕಾರದ ಎಲ್ಲಾ ಯೋಜನೆಗಳು ಬಡವರ ಪರವಾಗಿದ್ದು ಅದನ್ನು ಅರ್ಹ ಬಡವರಿಗೆ ತಲುಪ ಬೇಕು. ಆಗ ಮಾತ್ರ ರಾಜ್ಯ ಸರಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಪ್ರಯೋಜನಕಾರಿ ಆಗುತ್ತದೆ ಎಂದು ಹೇಳಿದರು.
ಈದಿನ.ಕಾಮ್ನ ಉಮರ್ ಯು.ಎಚ್. ಚುನಾವಣೆ ಸಂದರ್ಭದಲ್ಲಿ ಈದಿನ.ಕಾಮ್ ನಡೆಸಿದರ ಸಮೀಕ್ಷೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಪಂಚಾಯತ್ ರಾಜ್ನ ತರಬೇತಿದಾರ ಜಯಂತ್ ರಾವ್, ಸಹಬಾಳ್ವೆ ಉಡುಪಿಯ ವರೋನಿಕ ಕರ್ನೇಲಿಯೋ, ಯಾಸೀನ್ ಮಲ್ಪೆ, ನಾಗೇಶ್ ಉದ್ಯಾವರ, ಫಾ.ವಿಲಿಯಂ ಮಾರ್ಟಿಸ್, ಹುಸೇನ್ ಕೋಡಿಬೆಂಗ್ರೆ, ಅಝೀಝ್ ಉದ್ಯಾವರ ಉಪಸ್ಥಿತರಿದ್ದರು.







