ಗಂಗೊಳ್ಳಿ ದೋಣಿ ದುರಂತ: ಮೂರನೇ ಮೀನುಗಾರನ ಮೃತದೇಹ ಪತ್ತೆ

ಕುಂದಾಪುರ: ಗಂಗೊಳ್ಳಿಯ ಸೀವಾಕ್ ಸಮೀಪದ ಅಳಿವೆ ಪ್ರದೇಶದ ಸಮುದ್ರದಲ್ಲಿ ಮಂಗಳವಾರ ಬೆಳಿಗ್ಗೆ ದೋಣಿ ಮಗುಚಿ ಬಿದ್ದು, ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಮೀನು ಗಾರರ ಮೃತದೇಹ ಬುಧವಾರ ಪತ್ತೆಯಾಗಿದ್ದು, ಸುರೇಶ್ ಖಾರ್ವಿ ಮೃತದೇಹ ಗುರುವಾರ ಮುಂಜಾನೆ ಕುಂದಾಪುರ ಕೋಡಿ ಸೀವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಗಂಗೊಳ್ಳಿ ಬಂದರಿನಿಂದ ಜು. 15ರಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್ನೆಟ್ ನಾಡ ದೋಣಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು. ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಸುರೇಶ್ ಖಾರ್ವಿ ನಾಪತ್ತೆಯಾಗಿದ್ದು ಅವರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು.
ಬುಧವಾರ ಬೆಳಿಗ್ಗೆ ಕೋಡಿ ಲೈಟ್ ಹೌಸ್ ಸಮೀಪದಲ್ಲಿ ಲೋಹಿತ್ ಖಾರ್ವಿ ಮೃತದೇಹ, ಸಂಜೆ ವೇಳೆಗೆ ಹಳೆಅಳಿವೆ ಎಂಬಲ್ಲಿ ಜಗನ್ನಾಥ್ ಖಾರ್ವಿ ಮೃತದೇಹ ಪತ್ತೆಯಾಗಿತ್ತು. ರಾತ್ರಿಯವರೆಗೂ ಸುರೇಶ್ ಖಾರ್ವಿ ಅವರ ಸುಳಿವು ಲಭ್ಯವಾಗಿಲ್ಲದ ಕಾರಣ ಶೋಧ ಕಾರ್ಯ ಮುಂದುವರಿಸಿದ್ದು ಇಂದು (ಗುರುವಾರ) ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.





