ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜಾ
ಉಮೆದ್ 2026: ಉಡುಪಿ ಧರ್ಮಕ್ಷೇತ್ರದ 172 ವಿದ್ಯಾರ್ಥಿಗಳಿಗೆ 1.65 ಕೋಟಿ ರೂ. ಶೈಕ್ಷಣಿಕ ನೆರವು ನೀಡಿದ ಎಂಡಿಎಸ್ ಚಾರಿಟೀಸ್

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ ಹಸ್ತ ಚಾಚುವ ಮನುಷ್ಯರ ರೂಪದಲ್ಲಿಯೇ ದೇವರು ಬರುತ್ತಾನೆ. ಇತರರಿಗೆ ಒಳಿತನ್ನು ಬಯಸುವ ಮತ್ತು ಸಹಾಯ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾವು ದೇವರನ್ನು ಕಾಣಬಹುದು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.
ಅವರು ಸೋಮವಾರ ಉಡುಪಿ ಶೋಕಮಾತಾ ಚರ್ಚಿನ ಆವೆಮರಿಯಾ ಸಭಾಂಗಣದಲ್ಲಿ ಎಮ್ ಡಿ ಎಸ್ ಚಾರೀಟಿಸ್ ವತಿಯಿಂದ ಸಮುದಾಯದ ಆಸಕ್ತ, ಅಗತ್ಯವಿರುವ ಹಾಗೂ ಅರ್ಹ ಯುವಜನರು ವೃತ್ತಿಪರ ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಅವರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಆಯೋಜಿಸಿದ್ದ ಮಾರ್ಗದರ್ಶನ ಕಾರ್ಯಾಗಾರ ಉಮೆದ್ 2026ನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಎನ್ನುವುದು ಕೇವಲ ಹುಟ್ಟಿನಿಂದ ಬರುವುದಷ್ಟೇ ಅಲ್ಲ, ಅದನ್ನು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮಗೊಳಿಸಲು ಸಾಧ್ಯ. ಅದಕ್ಕೆ ಪೋಷಕರ ತಾಳ್ಮೆ ಮತ್ತು ಬೆಂಬಲ ಅತ್ಯಗತ್ಯ. ಬಾಲ್ಯದಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ನೀರೆರೆದು ಪೋಷಿಸಿದರೆ, ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡಬಲ್ಲರು.
ಎಮ್ ಡಿ ಎಸ್ ಟ್ರಸ್ಟ್ ಮೂಲ ಧ್ಯೇಯವಾದ “ಕಾಳಜಿ, ಬೆಂಬಲ ಮತ್ತು ಸಬಲೀಕರಣ”ವನ್ನು ಉಲ್ಲೇಖಿಸಿದ ಬಿಷಪ್, ಮೈಕಲ್ ಡಿಸೋಜಾ ಅವರ ಸೇವಾ ಮನೋಭಾವ ಹಾಗೂ ಮಾನವೀಯ ಮನಸ್ಸಿನಿಂದ ತಮ್ಮ ಸಹಾಯ ಹಸ್ತ ಚಾಚುವ ಮೂಲಕ ಧರ್ಮಪ್ರಾಂತವನ್ನು ಸಬಲೀಕರಿಸಿದ ಡಿಸೋಜಾ ಅವರನ್ನು ಅವರು ಶ್ಲಾಘಿಸಿದರು. ಅವರಿಂದ ಪಡೆದ ಬೆಂಬಲವನ್ನು ಸದಾ ಕೃತಜ್ಞತೆಯಿಂದ ಸ್ಮರಿಸಿಕೊಂಡು, ಸಮಾಜದ ಮೇಲೆ ತಮ್ಮದೇ ಆದ ಸಕಾರಾತ್ಮಕ ಗುರುತು ಮೂಡಿಸಲು ಫಲಾನುಭವಿಗಳು ಪ್ರಯತ್ನಿಸಬೇಕು ಎಂದು ಬಿಷಪ್ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಶೋಕ ಮಾತಾ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ, ಜೀವನ ಎಂಬುದು ಒಂದು ಅಪೂರ್ವ ವರ ಈ ಜೀವನ ಎಂಬ ದಾರಿಯಲ್ಲಿ ದೇವರು ನಮಗೆ ನೀಡಿದ ಸಂಪತ್ತನ್ನು ಪರರೊಂದಿಗೆ ಹಂಚಿಕೊಂಡಾಗ ದೇವರ ಕೃಪಾವರಗಳಿಗೆ ಪಾತ್ರರಾಗುತ್ತೇವೆ. ಈ ನಿಟ್ಟಿನಲ್ಲಿ ಮೈಕಲ್ ಡಿಸೋಜಾ ಅವರ ಸೇವೆ ಅಭಿನಂದನಾರ್ಹವಾಗಿದೆ. ವಿದ್ಯಾಭ್ಯಾಸಕ್ಕಾಗಿ ನೀಡಿದ ಆರ್ಥಿಕ ಸಹಾಯವನ್ನು ಪಡೆದು ಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಗುರಿಯೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವುದರೊಂದಿಗೆ ಇನ್ನೊಬ್ಬರಿಗೆ ನೆರವಾಗುವ ಗುಣವನ್ನು ಅಳಡವಡಿಕೊಳ್ಳುವಂತೆ ಕರೆ ನೀಡಿದರು.
ಎಂ.ಡಿ.ಎಸ್. ಚಾರಿಟೀಸ್ ಸಲಹೆಗಾರರಾದ ಸಿ.ಎ. ಲಯನಲ್ ಆರಾನ್ಹಾ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಕಳೆದ 13 ವರ್ಷಗಳಿಂದ ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ನೆರವಿನ ಸಮಗ್ರ ವಿವರವನ್ನು ಮಂಡಿಸಿದರು.
ಎಜುಕೇರ್ 2026 (ಉಡುಪಿ ಧರ್ಮಪ್ರಾಂತ್ಯ): 2026ನೇ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ಧರ್ಮಪ್ರಾಂತ್ಯದ 172 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗಾಗಿ ಎಂ.ಡಿ.ಎಸ್. ಚಾರಿಟೀಸ್ ವತಿಯಿಂದ 1.65 ಕೋಟಿ ರೂ. ಮಂಜೂರು ಮಾಡಲಾಗಿದೆ.
ಎಜುಕೇರ್ ಯೋಜನೆಯಡಿ ನೆರವು (2013–2025): 2013ರಿಂದ 2025ರವರೆಗೆ ಎಜುಕೇರ್ ಯೋಜನೆಯಡಿ ಈ ಪ್ರದೇಶದ ಒಟ್ಟು 3,838 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಗಿದೆ. ಇದರಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ 3,098 ವಿದ್ಯಾರ್ಥಿಗಳು ಹಾಗೂ ಉಡುಪಿ ಧರ್ಮಪ್ರಾಂತ್ಯದ 740 ವಿದ್ಯಾರ್ಥಿಗಳು ಸೇರಿದ್ದಾರೆ.
ವಸತಿ ನೆರವು: ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಎಂ.ಡಿ.ಎಸ್. ಚಾರಿಟೀಸ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯಕ್ಕೆ 79 ಲಕ್ಷ ರೂ. ಮೊತ್ತದ ವಸತಿ ನೆರವನ್ನು ಒದಗಿಸಲಾಗಿದೆ.
ಮೂರನೇ ಮಗುವಿನ ಪ್ರಾಯೋಜಕತ್ವ: ಕುಟುಂಬ ಕಲ್ಯಾಣ ಉಪಕ್ರಮದಡಿ ಉಡುಪಿ ಧರ್ಮಪ್ರಾಂತ್ಯದ ಅರ್ಹ ಕುಟುಂಬಗಳಿಗೆ 14.80 ಲಕ್ಷ ರೂ. ಮೊತ್ತದ ಆರ್ಥಿಕ ನೆರವನ್ನು ವಿತರಿಸಲಾಗಿದೆ.
ಎಂ.ಡಿ.ಎಸ್. ಹಳೆಯ ವಿದ್ಯಾರ್ಥಿಗಳ ಜಾಲ: “ಒಂದು ಜೀವನ ಮತ್ತೊಂದು ಜೀವನವನ್ನು ಸ್ಪರ್ಶಿಸಲಿ” ಎಂಬ ಧ್ಯೇಯವಾಕ್ಯದೊಂದಿಗೆ ಎಂ.ಡಿ.ಎಸ್. ಚಾರಿಟೀಸ್ನ ಹಳೆಯ ವಿದ್ಯಾರ್ಥಿಗಳ ಜಾಲವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಲಾಯಿತು. ವೃತ್ತಿ ಮಾರ್ಗದರ್ಶನ, ಉದ್ಯೋಗ ಸಹಾಯ, ಮಾರ್ಗದರ್ಶಕತ್ವ ಹಾಗೂ ಹಿಂದಿನ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇತರರಿಗೆ ನೆರವಾಗುವಂತೆ ಪ್ರೋತ್ಸಾಹಿಸುವ ಮೂಲಕ ಫಲಾನುಭವಿಗಳೊಂದಿಗೆ ದೀರ್ಘಕಾಲೀನ ಸಂಪರ್ಕವನ್ನು ಕಾಪಾಡಿಕೊಳ್ಳುವುದು ಈ ಜಾಲದ ಉದ್ದೇಶವಾಗಿದೆ.
ಸಮಾರಂಭದಲ್ಲಿ ನೆರೆದಿದ್ದವರಿಗೆ ಭರವಸೆ ನೀಡಿದ ಆರಾನ್ಹಾ ಅವರು, ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಸಂಸ್ಥೆಯು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷ ಉಡುಪಿ ಧರ್ಮಪ್ರಾಂತ್ಯದ 172 ವಿದ್ಯಾರ್ಥಿಗಳಿಗೆ ವೃತ್ತಿಪರ ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಟ್ರಸ್ಟ್ ವತಿಯಿಂದ ಸಹಾಯ ಹಸ್ತ ನೀಡಲಾಗುತ್ತದೆ.
ಕಾರ್ಯಕ್ರಮದ ಸಂದರ್ಭ ಹಲವು ವಿದ್ಯಾರ್ಥಿ ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಂ.ಡಿ.ಎಸ್. ಚಾರಿಟೀಸ್ ವತಿಯಿಂದ ಒದಗಿಸಲಾದ ಮಹತ್ವದ ಆರ್ಥಿಕ ನೆರವಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕಥೊಲಿಕ ಶಿಕ್ಷಣ ಮಂಡಳಿ ಮಂಗಳೂರು ಧರ್ಮಪ್ರಾಂತ್ಯದ ಇದರ ಕಾರ್ಯದರ್ಶಿ ವಂ|ಪ್ರವೀಣ್ ಲಿಯೋ ಲಸ್ರಾದೊ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಭಾಷಣ ಮಾಡಿದರು.
ಉಡುಪಿ ಚರ್ಚಿನ ಪಾಲನಾ ಪರಿಷತ್ ಉಪಾಧ್ಯಕ್ಷರಾದ ಮ್ಯಾಕ್ಷಿಮ್ ಡಿಸೋಜಾ, ಸಹಾಯಕ ಧರ್ಮಗುರು ವಂ|ಪ್ರವೀಣ್ ಲಿಯೋ ಡಿಸೋಜಾ, ಟ್ರಸ್ಟಿನ ಸದಸ್ಯರಾದ ಓಸ್ವಲ್ಡ್ ರೊಡ್ರಿಗಸ್, ಶುಭಾ ರೊಡ್ರಿಗಸ್, ಸ್ಟೀಫನ್ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.
ಕವಿ ಎಚ್ ಎಮ್ ಪೆರ್ನಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೀನಾ ಡಿಕೋಸ್ತಾ ವಂದಿಸಿದರು.






