ಗ್ಯಾರಂಟಿ ಯೋಜನೆ| ತಿಂಗಳಲ್ಲಿ ಕುಂದಾಪುರ ತಾಲೂಕಿಗೆ 20.25 ಕೋಟಿ ರೂ. ಅನುದಾನ: ಕಾನ್ಮಕ್ಕಿ

ಕುಂದಾಪುರ, ಜ.28: ರಾಜ್ಯ ಸರಕಾರದ ನಾಲ್ಕು ಗ್ಯಾರಂಟಿ ಯೋಜನೆಗಳ ಮೂಲಕ ಕಳೆದ ಒಂದು ತಿಂಗಳಲ್ಲಿ ಕುಂದಾಪುರ ತಾಲೂಕಿನ ಜನತೆಗೆ 20,25,69,896 ರೂ. ಅನುದಾನ ದೊರೆತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಡಿಸೆಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 10,06,98,000ರೂ., ಗೃಹಜ್ಯೋತಿ ಯೋಜನೆಯಲ್ಲಿ 4,54,14,271ರೂ., ಅನ್ನಭಾಗ್ಯ ಯೋಜನೆ ಯಲ್ಲಿ 2,57,85,945ರೂ., ಶಕ್ತಿ ಯೋಜನೆಯಲ್ಲಿ 3,06,71,680 ರೂ. ಅನುದಾನ ಕುಂದಾಪುರ ತಾಲೂಕಿಗೆ ಬಂದಿದೆ. ಯುವನಿಧಿ ಅನುದಾನ ಬಂದಿಲ್ಲ ಎಂದರು.
ಎಸೆಸೆಲ್ಸಿ ಪರೀಕ್ಷೆ ಸಂದರ್ಭ ವಿದ್ಯುತ್ ಕಡಿತ ಮಾಡದಂತೆ ಕೋಣಿ ನಾರಾಯಣ ಆಚಾರ್ಯ ಮೆಸ್ಕಾಂಗೆ ಮನವಿ ಮಾಡಿದರು. ಶಂಕರನಾರಾ ಯಣ ವಿಭಾಗದಲ್ಲಿ ಏಳು ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಮಂಜೂರಾತಿ ಯಾಗಿದೆ ಎಂದು ಮೆಸ್ಕಾಂ ಎಇ ಗುರುಪ್ರಸಾದ್ ಮಾಹಿತಿ ನೀಡಿದರು.
ಹಂಗಳೂರು ಕೋಡಿ ಭಾಗಕ್ಕೆ ಹೆಚ್ಚುವರಿ ಬಸ್ ಬೇಕು, ಬೆಂಗಳೂರಿನಲ್ಲಿ ಉಪಯೋಗಿಸಿ ಬಿಟ್ಟ ಹಳೆ ಬಸ್ಗಳನ್ನು ಇಲ್ಲಿಗೆ ನೀಡಲಾಗುತ್ತಿದೆ, ಸಚಿವರು ಒಂದು ಬಾರಿಯೂ ಗ್ಯಾರಂಟಿ ಸಮಿತಿಯವರ ಜೊತೆ ಸಭೆ ನಡೆಸಿಲ್ಲ, ಕೋಟ ಹೈಸ್ಕೂಲ್ ಬಳಿ ಬಸ್ ನಿಲುಗಡೆ ಬೇಕು ಎಂಬ ಬೇಡಿಕೆ, ದೂರುಗಳು ಸಭೆ ಯಲ್ಲಿ ಕೇಳಿಬಂದವು.
ಮೊದಲು 9 ಲಕ್ಷ ಕಿ.ಮೀ. ಓಡಿದ ಬಸ್ಗಳನ್ನು ಗುಜರಿಗೆ ಹಾಕ ಲಾಗುತ್ತಿತ್ತು. ಈಗ 14 ಲಕ್ಷ ಕಿ.ಮೀ. ಆದರೂ ಓಡಿಸಲಾಗುತ್ತಿದೆ. ಹಾಗಿದ್ದರೂ ಯಾವುದೇ ಬಸ್ನ್ನು ನಿರ್ವಹಣೆ ಮಾಡದೇ, ಓಡಾಟಕ್ಕೆ ಸೂಕ್ತ ಎಂದೆನಿಸದೇ ಕಳುಹಿಸುವುದಿಲ್ಲ. ಯಾವುದೇ ಬಸ್ ಅರ್ಧದಲ್ಲಿ ನಿಂತಿಲ್ಲ. ಹೊಸ ಬಸ್ ಗಳು ಸದ್ಯ ಬಂದಿಲ್ಲ, ಹೊಸ ಮಾರ್ಗಗಳಿಗೆ ಬಸ್ ಓಡಿಸಲು ಇನ್ನೂ ಯಾವುದೇ ಅನುಮತಿ ಸಿಕ್ಕಿಲ್ಲ ಎಂದು ಡಿಪೊ ಮೆನೆಜರ್ ಉದಯ ಕುಮಾರ್ ಶೆಟ್ಟಿ ಸಭೆಗೆ ತಿಳಿಸಿದರು.
ಅಮಾಸೆಬೈಲು ಕೆಳಸುಂಕ ಬಸ್ ಓಡಾಟ 15 ದಿನಗಳಿಂದ ನಡೆಸುತ್ತಿದೆ. ಮರವಂತೆ ಬಡಾಕೆರೆ ಬಸ್ ಓಡಾಟಕ್ಕೆ ಇದ್ದ ತಡೆ ತೆರವಾಗಿ ಬಸ್ ಹೋಗುತ್ತಿದೆ. ಹೊಸ ಬಸ್ ಮಾರ್ಗಗಳ ಸರ್ವೆಗೆ ಬಂದ ಸೂಚನೆಯಂತೆ ಸರ್ವೆ ಕಾರ್ಯ ನಡೆದಿದೆ ಎಂದ ಅಧ್ಯಕ್ಷರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್, ಅಕ್ಟೋಬರ್ ವರೆಗಿನ ಗೃಹಲಕ್ಷ್ಮಿ ಅನುದಾನ ಬಂದಿದೆ. ಫಲಾನುಭವಿ ಮೃತಪಟ್ಟರೆ ಮರಣ ಪ್ರಮಾಣಪತ್ರ ನೀಡಿ ಆ ಮನೆಯ ಬೇರೆ ಸದಸ್ಯರು ಫಲಾನುಭವಿ ಆಗಬಹುದು. ಮರಣ ಹೊಂದಿದ ಫಲಾನುಭವಿಯ ಖಾತೆಗೆ ಮರಣ ಹೊಂದಿದ ನಂತರದ ತಿಂಗಳುಗಳ ಹಣ ಜಮೆಯಾಗಿದ್ದರೆ ಬ್ಯಾಂಕಿನಿಂದ ನೇರ ಸರಕಾರಕ್ಕೆ ಮರುಪಾವತಿ ಆಗುತ್ತದೆ ಎಂದರು.
ಬೆಳ್ತಿಗೆ ಅಕ್ಕಿ ಬದಲು ಕುಚ್ಚುಲಕ್ಕಿ ನೀಡುತ್ತಿದ್ದು ಈ ಕುಚ್ಚುಲಕ್ಕಿ ಕರಾವಳಿ ಜನ ಸೇವಿಸುವಂತಿಲ್ಲ. ಬೆಳ್ತಿಗೆ ಪ್ರಮಾಣ ಹೆಚ್ಚಿಸಿ ಎಂದು ಅಭಿಜಿತ್ ಪೂಜಾರಿ ಆಗ್ರಹಿಸಿದರು. ಬಿಪಿಎಲ್ ಪಡಿತರ ಅಕ್ರಮ ಮಾರಾಟ ತಡೆಯಬೇಕು ಎಂದು ಝಹೀರ್ ಒತ್ತಾಯಿಸಿದರು. ಬೆಳ್ತಿಗೆ ಬರುವ ಪ್ರಮಾಣವೇ ಕಡಿಮೆಯಾಗಿದೆ ಎಂದು ಆಹಾರ ನಿರೀಕ್ಷಕ ಸುರೇಶ್ ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ಸ್ವಾಗತಿಸಿದರು. ಸದಸ್ಯರಾದ ಆಶಾ ಕರ್ವಾಲೊ, ಗಣೇಶ್, ಚಂದ್ರ ಕಾಂಚನ್, ಸವಿತಾ ಪೂಜಾರಿ, ಅರುಣ್ ಉಪಸ್ಥಿತರಿದ್ದರು.







