Hebri | ನೆಟ್ವರ್ಕ್ ಸಮಸ್ಯೆ : ನಾಡ್ಪಾಲಿಗೆ ಸಂಸದ ಕೋಟ ಭೇಟಿ

ಹೆಬ್ರಿ, ನ.21: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಗುಂಬೆ, ಕಾಸನಮಕ್ಕಿ ಹಾಗೂ ಇನ್ನಿತರ ಬಿಎಸ್ಸೆನ್ನೆಲ್ ಟವರ್ ಗಳಲ್ಲಿ ಕಂಡುಬಂದಿರುವ ನೆಟ್ವರ್ಕ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ನಾಡ್ಪಾಲಿಗೆ ಭೇಟಿ ನೀಡಿ ಚರ್ಚಿಸಿದರು.
ಆಗುಂಬೆ ಟವರ್ ನಲ್ಲಿ ಸಕಾಲದಲ್ಲಿ ನೆಟ್ವರ್ಕ್ ಸಿಗದೇ ಇರುವುದು ಮತ್ತು ಬ್ಯಾಟರಿ ಹಾಗೂ ಸೋಲಾರ್ ಅಳವಡಿಕೆ ಆಗದಿರುವುದರ ಸಮಸ್ಯೆಯಿಂದಾಗಿ ನೆಟ್ವರ್ಕ್ ಸಿಗದೆ ಗ್ರಾಪಂನ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಯಾಗುತ್ತಿರುವುದನ್ನು ನಾಡ್ಪಾಲು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಸಂಸದರ ಗಮನಕ್ಕೆ ತಂದರು.
ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಕಾಸನಮಕ್ಕಿಯಲ್ಲಿ ನೂತನ ಟವರ್ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಸಹಮತಿ ಸಿಗದೇ ಇರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪಂಚಾಯತ್ ಸದಸ್ಯರು ಅವರ ಗಮನಕ್ಕೆ ತಂದರು. ತಕ್ಷಣ ದೂರವಾಣಿ ಮೂಲಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ ಕೋಟ ಇನ್ನೊಂದು ವಾರದಲ್ಲಿ ಟವರ್ ಬದಲಾವಣೆಗೆ ಅನುಮತಿ ನೀಡಬೇಕೆಂದು ಸಲಹೆ ಇತ್ತರು.
ಆಗುಂಬೆ ಟವರ್ಗೆ ಬ್ಯಾಟರಿ ಮತ್ತು ಸೋಲಾರ್ ಅಳವಡಿಸಲು ಸೂಚನೆ ನೀಡಿದ ಕೋಟ, ಆಗುಂಬೆಯ ಪ್ರಥಮ ತಿರುವಿನ ಬಳಿ ಅಥವಾ ನಾಡ್ಪಾಲು ಗ್ರಾಪಂನ ಸನಿಹದಲ್ಲಿ ನೂತನ ಟವರ್ ಅಳವಡಿಕೆಗೆ ಪ್ರಸ್ತಾಪ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸಲಹೆ ಇತ್ತರು. ನಾಡ್ಪಾಲು ತೀರ ಹಿಂದುಳಿದ ಗ್ರಾಮವಾಗಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿ ಹೊಸ ಟವರ್ ಗಳ ಮಂಜೂರಾತಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಸಂಸದ ಕೋಟ ಸೂಚಿಸಿದರು.
ನಾಡ್ಪಾಲು ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದಿನೇಶ್ ಹೆಗ್ಡೆ, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಜರಿದ್ದು ಅಭಿಪ್ರಾಯ ತಿಳಿಸಿದರು. ಬಿಎಸ್ಸೆನ್ನೆಲ್ ಅಧಿಕಾರಿಗಳಾದ ಉಡುಪಿ ಎಜಿಎಂ ಹರಿಕುಮಾರ್, ಕೃಷ್ಣ ಉಪಸ್ಥಿತರಿದ್ದರು.







