ಮಾನವ ಕಳ್ಳಸಾಗಾಣಿಕೆ ಹೀನಕೃತ್ಯ, ತಡೆಗಟ್ಟಲು ಎಲ್ಲರೂ ಬದ್ಧರಾಗಬೇಕು : ಮಂಜುನಾಥ್

ಕೋಟ, ನ.11: ಮಾನವ ಕಳ್ಳ ಸಾಗಾಣಿಕೆ ಮಾಡುವುದು, ದೌರ್ಜನ್ಯ ಎಸಗುವುದು ಒಂದು ಹೀನಕೃತ್ಯವಾಗಿದೆ. ಇದೊಂದು ಸಮಾಜಕ್ಕೆ ಅಂಟಿದ ರೋಗ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕರು ಬದ್ಧರಾಗಿರಬೇಕು ಎಂದು ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಹಾಗೂ ಖ್ಯಾತ ವಕೀಲರಾದ ಮಂಜುನಾಥ್ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಕೋಟದ ವಿವೇಕ ಪದವಿ ಪೂರ್ವ ಕಾಲೇಜು, ಓಯಾಶಿಸ್ ಇಂಡಿಯಾ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಪಡಿ ಮಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಸಂಯುಕ್ತವಾಗಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆಯ ತಡೆ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮಕ್ಕಳು, ಮಹಿಳೆ, ಪುರುಷ ಎನ್ನದೆ ಎಲ್ಲ ರೀತಿಯ ಜನರನ್ನು ಇಂದು ವಿವಿಧ ಕಾರಣಗಳಿಗಾಗಿ ಅಪಹರಣ, ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹಣದ ಆಮಿಷ, ದೌರ್ಜನ್ಯಗಳಿಂದ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಇಂದು ಯಾರದೋ ಕುಟುಂಬದಲ್ಲಿ ಆಗಿರುವಂತದ್ದು, ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಲ್ಲೂ ಅಗಬಹುದು. ಈ ಎಚ್ಚರಿಕೆಯಿಂದ ನಾವು ಎದುರಿಸಿ, ಕಳ್ಳ ಮಾನವ ಸಾಗಾಣಿಕೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಾನವ ಕಳ್ಳ ಸಾಗಾಣಿಕೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದವರು ಹೇಳಿದರು.
ಮಾನವ ಕಳ್ಳ ಸಾಗಾಣಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಅನೇಕ ಸಲ ಪೊಲೀಸರಿಗೆ ಮಾಹಿತಿ ಕೊಟ್ಟರೆ ತಾವು ಸಾಕ್ಷಿ ಆಗಿ, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ತಪ್ಪು ಗ್ರಹಿಕೆ ಇರುತ್ತದೆ. ಆದರೆ ಸಾಕ್ಷಿದಾರ ಒಂದು ಸಲ ಮಾತ್ರ ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿದರೆ ಸಾಕು. ಮತ್ತೇ ಅವರು ಬರುವ ಅಗತ್ಯವಿಲ್ಲ. ಆದ್ದರಿಂದ ಸಮಾಜ ಈ ಅನಿಷ್ಠವನ್ನು ತೊಲಗಿಸಲು ಧೈರ್ಯದಿಂದ ಮುಂದೆ ಬಂದು, ಮಾಹಿತಿ ಹಂಚಿಕೊಳ್ಳಬೇಕು ಎಂದು ನ್ಯಾಯವಾದಿ ಮಂಜುನಾಥ್ ವಿವರಿಸಿದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ್ ನಾವಡ ಅಧ್ಯಕ್ಷತೆ ವಹಿಸಿ, ಮಾನವ ಕಳ್ಳ ಸಾಗಾಣಿಕೆ ಅಪರಾಧ ಹಾಗೂ ರಕ್ಷಣಾತ್ಮಕ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಓಯಾಶಿಸ್ ಇಂಡಿಯಾದ ಸಂಗೀತಾ, ಮಾನವ ಕಳ್ಳ ಸಾಗಣಿಕೆಯ ತಡೆ ಅಭಿಯಾನದ ಗುರಿ ಮತ್ತು ಉದ್ದೇಶದ ಕುರಿತು ವಿವರಿಸಿದರು. ನಂತರ ಕ್ರೈಸ್ಟ್ ಯುನಿರ್ವಸಿಟಿಯ ವಿದ್ಯಾರ್ಥಿಗಳು ಮಾನವ ಮಾರಾಟ, ಕಳ್ಳ ಸಾಗಣಿಕೆ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತಾಗಿ ಜನಜಾಗೃತಿ ಮೂಡಿಸುವ ಬೀದಿ ನಾಟಕವನ್ನು ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ರಮಾನಂದ ಭಟ್ ಚೇಂಪಿ, ಉಡುಪಿ ಜಿಲ್ಲಾ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ರಾಧಾ ದಾಸ್, ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ತಿಲೋತ್ತಮ ನಾಯಕ್, ಕೋಟ ವಿವೇಕ ಬಾಲಕರ ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ರತಿಬಾಯಿ, ವಿವೇಕ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ವಿವೇಕ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರೇಮಾನಂದ, ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪ್ರೀತಿ ರೇಖಾ, ಓಯಾಶಿಸ್ ಸಂಸ್ಥೆಯ ಆರ್ಮುಗಂ, ಸಂಗೀತ ಹಾಗೂ ಇತರರು ಉಪಸ್ಥಿತರಿದ್ದರು.







