ಕಾಪು | ಅಲ್ಇಹ್ಸಾನ್ ವಿದ್ಯಾಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕಾಪು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿರುವ ಮೂಳೂರು ಅಲ್- ಇಹ್ಸಾನ್ ವಿದ್ಯಾಸಂಸ್ಥೆಯಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಅಲ್-ಇಹ್ಸಾನ್ ಶಿಕ್ಷಣ ಸಂಸ್ಥೆಯ ಮುಖ್ಯ ಸಲಹೆ ಗಾರ ಅನ್ವರ್ ಹುಸೇನ್ ಗೂಡಿನಬಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಮತ್ತು ಟ್ರೋಫಿ ನೀಡಿ ಸನ್ಮಾನಿಸಲಾಯಿತು.
ಎರಡು ವಿಭಾಗಗಳಲ್ಲಿ ಶೇ.100 ಫಲಿತಾಂಶ ದಾಖಲಿಸಲು ಶ್ರಮಿಸಿದ ಎಲ್ಲಾ ಶಿಕ್ಷಕ-ಶಿಕ್ಷಕಿಯರನ್ನು ನಗದು ನೀಡಿ ಗೌರವಿಸಲಾಯಿತು. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕಾರ್ಯಾಧ್ಯಕ್ಷ ಮುಹಮ್ಮದ್ ಸೀದಿ ಹಾಜಿ ಬಹರೈನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರೊ.ಯೂಸುಫ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಸದಸ್ಯ ಮುಹಮ್ಮದ್ ಇಕ್ಬಾಲ್, ಮರ್ಕಝ್ ಸಮಿತಿಯ ಮಾಜಿ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ, ಸದಸ್ಯರಾದ ಅಭಿಮಾನ್ ಹಾಜಬ್ಬ, ಪ್ರೊ.ಯೂಸುಫ್, ಸಂಸ್ಥೆಯ ವ್ಯವಸ್ಥಾಪಕ ಮೌಲನಾ ಯು.ಕೆ. ಮುಸ್ತಫ ಸಅದಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಕೆ.ಎಸ್.ಹಬೀಬ್ ರೆಹಮಾನ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಆರಿಫಾ ಶೇರಿನ್ ಸನ್ಮಾನಿತರ ಪತ್ರ ವಾಚಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸೈಯದ್ ಶಬನಾ ವಂದಿಸಿದರು. ಪೂರ್ವ ಪ್ರಾಥಮಿಕ ವಿಭಾಗ ಕೋ-ಆರ್ಡಿನೇಟರ್ ಶಶಿ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.






