ಡಾ.ಲಕ್ಷ್ಮಣ ವಿ.ಎ.ಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸಮಿತಿ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾ ಲೋಕದಲ್ಲಿ ಶನಿವಾರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ 2026ನ್ನು ಬೆಳಗಾವಿಯ ಡಾ.ಲಕ್ಷ್ಮಣ ವಿ.ಎ. ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೋಡೆಗೆ ನೇತು ಹಾಕಿದ ಭೂಪಟ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಡಾ.ಮಾಧವಿ ಭಂಡಾರಿ,ಅರ್ಥ ವ್ಯವಸ್ಥೆ, ಮಾರುಕಟ್ಟೆ ನೀತಿ ನಿರೂಪಕರು ಸಮಾಜದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಯುದ್ಧ ಆರಂಭವಾದರೆ ಶಾಲೆ, ಆಸ್ಪತ್ರೆಗೆ ದಾಳಿ ಮಾಡಬಾರದೆನ್ನುವ ನೀತಿ ಗಾಳಿಗೆ ತೂರಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಮಾತನಾಡಿ, ಸಾಹಿತ್ಯ ಬರಹಗಳು ಸಮಾಜ ಪರ ಧ್ವನಿಯಾಗಬೇಕು. ಸಾಮಾಜಿಕ ಜಾಲತಾಣ, ಒತ್ತಡ, ತಂತ್ರಜ್ಞಾನ, ವೇಗದ ಬದುಕಿನ ನಡುವೆ ಸಾಹಿತ್ಯದ ಅಗತ್ಯ ಹೆಚ್ಚಾಗಿದೆ. ಸಮಾಜ ಸಂವೇದನಾ ಶೀಲವಾಗಬೇಕಾಗಿದೆ ಎಂದು ಹೇಳಿದರು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆರ್ಆರ್ಸಿ ಸಹಾಯಕ ಸಂಶೋಧಕ ಡಾ.ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.






