Padubidri | ಕಾಡಿಪಟ್ಣ ಜೀವನ್ ಸೇವಾ ಬ್ರಿಗೇಡ್ ನಿಂದ ಸಹಾಯಹಸ್ತ

ಪಡುಬಿದ್ರಿ: ಕಿಡ್ನಿ ತೊಂದರೆಗೊಳಗಾದವರಿಗೆ ಸಹಾಯ ಹಸ್ತ ನೀಡುವ ಸದುದ್ದೇಶದೊಂದಿಗೆ 3 ವರ್ಷಗಳ ಹಿಂದೆ ಆರಂಭಗೊಂಡ ದಿ.ಜೀವನ್ ಎಸ್. ಸ್ಮರಣಾರ್ಥ ಪಡುಬಿದ್ರಿ-ಕಾಡಿಪಟ್ಣ ಜೀವನ್ ಸೇವಾ ಬ್ರಿಗೇಡ್ ವತಿಯಿಂದ ಶುಕ್ರವಾರ ಸಹಾಯಹಸ್ತ ವಿತರಣೆ ಸಮಾರಂಭ ನಡೆಯಿತು.
ಮೊಗವೀರ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿಜಯ ಕೆ. ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಸಿಹಿತ್ಲು ಕದಿಕೆ ಮೊಗವೀರ ಸಭಾ ಅಧ್ಯಕ್ಷ ಗಿರೀಶ್ ಕುಮಾರ್ ಶ್ರೀಯಾನ್, ಶಾಯನ್ ರಿಚರ್ಡ್ ಕೈಪುಂಜಾಲು, ಸಂತೋಷ್ ಶ್ರೀಯಾನ್ ಕೈಪುಂಜಾಲು, ಶಶಿಕಾಂತ್ ಪಡುಬಿದ್ರೆ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ 8 ಮಂದಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವಿಭಜಿತ ದ.ಕ. ಜಿಲ್ಲಾ ವ್ಯಾಪ್ತಿಯ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಮೊದಲ ವರ್ಷ 2 ಮಂದಿಗೆ, ಕಳೆದ ವರ್ಷ 6 ಮಂದಿಗೆ ಸಹಾಯಹಸ್ತ ನೀಡಲಾಗಿದ್ದು, ಮುಂದಿನ ವರ್ಷ 10 ಮಂದಿ ಫಲಾನುಭವಿಗಳಿಗೆ ಸಹಾಯಹಸ್ತ ನೀಡಲು ನಿರ್ಧರಿಸಲಾಗಿದೆ. ಈ ಬಾರಿ 1.20 ಲಕ್ಷ ರೂ. ಸಹಾಯಧನ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕಿಶೋರ್ ಕಾಂಚನ್ ಸ್ವಾಗತಿಸಿದರು. ಸಹನಾ ಆರ್. ಮೆಂಡನ್ ಕಾರ್ಯಕ್ರಮ ನಿರೂಪಿಸಿದರು.




